Thursday 29 September 2016

ಮೈಸೂರು ನಗರಕ್ಕೆಆಗಮಿಸಿದ ನಾಡೋಜ ಡಾ. ಚೆನ್ನವೀರ ಕಣವಿ ಅವರಿಗೆ ಆತ್ಮೀಯ ಸ್ವಾಗತ


ಸೆ. 30 ರಂದು ಶ್ರದ್ದಾಂಜಲಿ ವಾಹನ ಹಸ್ತಾಂತರ
       ಮೈಸೂರು.ಸೆ.29. ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ ಅವರು ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಶ್ರದ್ದಾಂಜಲಿ ವಾಹನವನ್ನು ಕೆ.ಆರ್.ಆಸ್ಪತ್ರೆಗೆ ಹಸ್ತಾಂತರಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ನಗರಕ್ಕೆ ನಾಡೋಜ ಡಾ. ಚೆನ್ನವೀರ ಕಣವಿ ಅವರಿಗೆ ಆತ್ಮೀಯ ಸ್ವಾಗತ
ಮೈಸೂರು, ಸೆ. 29. ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸುವ ನಾಡೋಜ ಡಾ. ಚೆನ್ನವೀರ ಕಣವಿ ಅವರು ಗುರುವಾರ ಬೆಳಗ್ಗೆ 7 ಗಂಟೆಗೆ ಧಾರವಾಡ ಎಕ್ಸ್‍ಪ್ರೆಸ್ ರೈಲಿನ ಮೂಲಕ ಮೈಸೂರಿಗೆ ಆಗಮಿಸಿದರು.
ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡುವ ಅವರನ್ನು ಸ್ವಾಗತ ಹಾಗೂ ಆಮಂತ್ರಣ ಸಮಿತಿಯ ಕಾರ್ಯದರ್ಶಿಗಳಾದ ಪುಟ್ಟಶೇಷಗಿರಿ, ಮೈಸೂರು ತಾಲ್ಲೂಕು ತಹಶೀಲ್ದಾರ್ ರಮೇಶ್‍ಬಾಬು, ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ಜಾನ್ಸನ್, ಶಿಷ್ಟಾಚಾರ ಅಧಿಕಾರಿಗಳಾದ ನವೀನ್, ಜಿಲ್ಲಾಧಿಕಾರಿಗಳ ಕಚೇರಿಯ ಲೆಕ್ಕಾಧಿಕಾರಿ ಗೋವಿಂದಯ್ಯ ಸೇರಿದಂತೆ ಸ್ವಾಗತ ಸಮಿತಿಯ ಸದಸ್ಯರು ಜಿಲ್ಲಾಡಳಿತದ ಪರವಾಗಿ ರೈಲ್ವೇ ನಿಲ್ದಾಣದಲ್ಲಿ ಮೈಸೂರು ನಗರಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಅಲ್ಲಿಂದ ನಾಡೋಜ ಡಾ. ಚೆನ್ನವೀರ ಕಣವಿ ಅವರನ್ನು ಡಿ.ವಿ. ಕಾರಿನ ಮೂಲಕ ಸರ್ಕಾರಿ ಅತಿಥಿ ಗೃಹಕ್ಕೆ ಕರೆದುಕೊಂಡು ಬರಲಾಯಿತು. ಜಿಲ್ಲಾಧಿಕಾರಿಗಳಾದ ರಂದೀಪ್ ಡಿ. ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಟಿ. ವೆಂಕಟೇಶ್ ಅವರು ನಾಡೋಜ ಕಣವಿ ಅವರನ್ನು ಅತಿಥಿಗೃಹದಲ್ಲಿ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು.
ಸರ್ಕಾರಿ ಅತಿಥಿ ಗೃಹದಲ್ಲಿ ಅವರ ವಾಸ್ತವ್ಯಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಶ್ರೀಯುತರು ಗುರುವಾರ ಮತ್ತು ಶುಕ್ರವಾರ ವಿವಿಧ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಅಕ್ಟೋಬರ್ 1 ರಂದು ಮಧ್ಯಾಹ್ನ 11.40 ಗಂಟೆಗೆಕ್ಕೆ ಮೈಸೂರು ದಸರಾ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು.
ಡಾ. ಚೆನ್ನವೀರ ಕಣವಿ ಅವರೊಂದಿಗೆ ಅವರ ಪುತ್ರ ಶಿವಾನಂದ ಕಣವಿ ಅವರು ಸಹ ಗುರುವಾರ ಆಗಮಿಸಿದ್ದು, ಅವರ ಕುಟುಂಬದ ಇತರ ಸುಮಾರು 20 ಸದಸ್ಯರು ಮುಂದಿನ ದಿನಗಳಲ್ಲಿ ಮೈಸೂರಿಗೆ ಆಗಮಿಸಿ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಅವರೆಲ್ಲರ ವಾಸ್ತವ್ಯಕ್ಕೆ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಿಷ್ಟಾಚಾರ ಅಧಿಕಾರಿಗಳು ತಿಳಿಸಿದ್ದಾರೆ

No comments:

Post a Comment