Sunday 4 October 2015

ಮಂಡ್ಯ: ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಮಾಡಲು ಯುವ ಸಂಘಟನೆಗಳು ಮುಂದಾಗಬೇಕು ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್ ತಿಳಿಸಿದರು.
ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಜಿಲ್ಲಾ ಯುವ ಪರಿಷತ್ ವತಿಯಿಂದ ನಡೆದ ಯುವ ಕಲ್ಯಾಣ ನಿಧಿ ಸದಸ್ಯತ್ವ ನೋಂದಾವಣಿ ಆಂದೋಲನ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ ಡಾ. ಎಚ್.ಪಿ. ಮಂಜುಳಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಅನಕ್ಷರತೆ, ದುಷ್ಚಟಗಳನ್ನು ನಿರ್ಮೂಲನೆ ಮಾಡಲು ಯುವ ಮನಸ್ಸುಗಳು ಮುಂದಾಗಬೇಕಿದೆ. ಈ ಸಂಬಂಧ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಯುವ ಸಂಘಟನೆಗಳ ಬಲವರ್ಧನೆಗೆ ನಮ್ಮೂರ ಶಾಲೆಗೆ ನಮ್ಮೂರು ಯುವಜನರು, ಯುವಚೇತನ, ಯುವ ಕ್ರೀಡಾ ಮತ್ತು ಯೋಜನೆಯನ್ನು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿದೆ ಎಂದು ತಿಳಿಸಿದರು.
ಸಾಮಾಜಿಕ ಮೌಲ್ಯಗಳನ್ನು ಕಾಪಾಡಲು ಯುವಜನರಿಗೆ ಹಲವು ರೀತಿಯ ತರಬೇತಿಗಳನ್ನು ರೂಪಿಸಿದೆ. ಯುವ ಕಲ್ಯಾಣ ಕಾರ್ಯಕ್ರಮಗಳನ್ನು ಸಾರ್ವತ್ರೀಕರಣಗೊಳಿಸಲು ಚುನಾಯಿತ ಪ್ರತಿನಿಧಿಗಳು ಮತ್ತು ಯುವ ಸಂಘಟನೆಗಳು ಮುಂದಾಗಬೇಕಿದೆ ಎಂದರು.
 ಪಾಂಡವಪುರ ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜು, ಯುವ ಪರಿಷತ್‍ನ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಯುವಜನರಿಗೆ ಉತ್ತೇಜನ ನೀಡಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಯುವ ಸಂಘಟನೆಗಳಿಗೆ ಹೆಚ್ಚಿನ ಮಟ್ಟದಲ್ಲಿ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದರು.
ಪ್ರಸ್ತುತ ಯುವಜನರಲ್ಲಿ ನಕಾರಾತ್ಮಕ ಧೋರಣೆ ಹೆಚ್ಚುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಯುವಜನರಿಗಾಗಿಯೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಯುವಜನರ ಸಬಲೀಕರಣಗೊಳ್ಳಲು ಮುಂದಾಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಯುವ ಪರಿಷತ್‍ನ ಅಧ್ಯಕ್ಷ ಮಂಗಲ ಎಂ. ಯೋಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಕಲ್ಯಾಣ ನಿಧಿ ಬಗ್ಗೆ ಮಾಹಿತಿ ಹಾಗೂ ಯುವ ಸಂಘಟನೆಗಳ ಕುರಿತು ಮಾತನಾಡಿದರು.
ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದ ಶ್ರೀ ಸೋಮೇಶ್ವರ ಯುವ ಕಲಾ ಬಳಗದ ಸದಸ್ಯರು 5 ಸಾವಿರ ಹಣವನ್ನು ಯುವ ಕಲ್ಯಾಣ ನಿಧಿಗೆ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ. ಎಚ್.ಪಿ. ಮಂಜುಳಾ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಸ್ಕøತಿ ಚಿಂತಕಿ ಡಾ. ಲೀಲಾ ಅಪ್ಪಾಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಬಾರ ನಿರ್ದೇಶಕ ಸ್ವಾಮಿ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ, ತಳಗವಾದಿ ನಾಗರಾಜು, ಬಿ.ಎಸ್. ಅನುಪಮ, ವಿಜಯಕುಮಾರ್, ಜಿ.ಎನ್. ಕೆಂಪರಾಜು, ಕೆ.ಸಿ. ಪ್ರಕಾಶ್, ಸಂತೆಕಸಲಗೆರೆ ಬಸವರಾಜು, ಬೇಲೂರು ಸೋಮಶೇಖರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅ. 9ರಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ತಾಲೂಕಿನ ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬ ಸದಸ್ಯರನ್ನು ರಾಹುಲ್ ಗಾಂಧಿಯವರು ಭೇಟಿ ಮಾಡಿ ಸಾಂತ್ವನ ಹೇಳುವರು. ನಂತರ ವಿದ್ಯಾರ್ಥಿ ಮುಖಂಡರು, ರೈತರು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತಾವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದರು.
ಕೇಶಿಫ್ ವತಿಯಿಂದ ಮಂಡ್ಯ-ಗುಬ್ಬಿ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಂಡ್ಯ- ಮೇಲುಕೋಟೆ ರಸ್ತೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ. ಶೀಘ್ರ ಕೆಲಸ ಪ್ರಾರಂಭಿಸಬೇಕಾಗಿದ್ದು, ರಾಹುಲ್ ಗಾಂಧಿ ಭೇಟಿ ಹಾಗೂ ರಸ್ತೆ ಅಭಿವೃದ್ಧಿ ಕುರಿತಂತೆ ಪರಿಶೀಲನೆ ನಡೆಸಲು ತಾವು ಆಗಮಿಸಿದ್ದಾಗಿ ಸ್ಪಷ್ಟಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಆತ್ಮಾನಂದ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್, ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಅಧಿಕಾರಿಗಳಾದ ಶಂಕರ್, ಸಿ. ಮಾಧು, ಜನಾರ್ಧನ್ ಇತರರು ಇದ್ದರು.

No comments:

Post a Comment