Monday 5 October 2015

ಶಾಸಕ ಜಿ.ಟಿ.ದೇವೇಗೌಡರಿಂದ ಭೂ ಒತ್ತುವರಿ: ನೊಂದ ರೈತನಿಂದ ಪ್ರತಿಭಟನೆ
ಮೈಸೂರು: ಶಾಸಕ ಜಿ.ಟಿ.ದೇವೇಗೌಡರು ತಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ತಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸಿ ನೊಂದ ರೈತ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ನೊಂದ ರೈತ ರಟ್ನಹಳ್ಳಿ ಗ್ರಾಮದ ನಿವಾಸಿ ಸುಬ್ಬೇಗೌಡ ಹಾಗೂ ಆತನ ಕುಟುಂಬದವರು ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮೈಸೂರು ತಾಲೂಕು ಇಲವಾಲ ಹೋಬಳಿಯ ರಟ್ನಹಳ್ಳಿ ಗ್ರಾಮದ ಸರ್ವೆ ನಂ 52 ರಲ್ಲಿ 338 ಎಕರೆ ಜಮೀನು ಎಂ.ಆರ್. ನಂ 5/98-99 ರ ಪ್ರಕಾರ ನನ್ನ ಸ್ವಾಧೀನಾನುಭವದಲ್ಲಿರಬೇಕು, ಆದರೆ 3.38 ಎಕರೆ ಪ್ರದೇಶದಲ್ಲಿ ಕೇವಲ 1.38 ಎಕರೆ ಮಾತ್ರ ನನ್ನ ಸ್ವಾಧೀನಾನುಭವದಲ್ಲಿದೆ. ಇನ್ನು ಇದೇ ಗ್ರಾಮದ ಸರ್ವೆ ನಂ 178 ರಲ್ಲಿ 2.20 ಎಕರೆ ಜಮೀನು ನನ್ನ ಮಗ ಎಸ್.ಆರ್. ರವಿಕುಮಾರ್ ಹೆಸರಿನಲ್ಲಿದೆ. ದಾಖಲಾತಿಗಳಲ್ಲಿ 2.20 ಎಕರೆ ಜಮೀನು ನನ್ನ ಮಗನ ಹೆಸರಿನಲ್ಲಿದೆ. ಆದರೆ ವಾಸ್ತವವಾಗಿ ನನ್ನ ಮಗನಿಗೆ ಜಮೀನು ಲಭ್ಯವಿಲ್ಲ, ನಮ್ಮೀಬ್ಬರಿಗೆ ಸೇರಿದ ಒಟ್ಟು 4.20 ಎಕರೆ ಜಮೀನು ಕೈತಪ್ಪಿ ಹೋಗಿದೆ. ಇದು ಪ್ರಭಾವಿ ರಾಜಕಾರಣಿ, ಶಾಸಕರೂ ಆದ ಜಿ.ಟಿ.ದೇವೇಗೌಡರ ಪಾಲಾಗಿದೆ. ನಮ್ಮ ಜಮೀನಿನನ್ನು ಅವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಎಷ್ಟೇ ಮನವಿ ಮಾಡಿದರೂ ನಮಗೆ ಬಿಟ್ಟು ಕೊಡುತ್ತಿಲ್ಲ, ಕೇಳಿದರೆ ದೌರ್ಜನ್ಯ ನಡೆಸಿ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಸಂಸಾರವನ್ನು ಬೀದಿಗೆ ನೂಕಿದ್ದಾರೆ. ಅವರಿಂದ ಆಗಿರುವ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿ, ಕಂದಾಯ ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆದ ಕಾರಣ ನನಗೆ ನ್ಯಾಯ ದೊರಕಿಸಿಕೊಡಬೇಕು, ಅಲ್ಲಿಯ ತನಕ ಧರಣಿಯನ್ನು ಮುಂದುವರಿಸುವುದಾಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.  

No comments:

Post a Comment