Friday 30 October 2015


  ಕನ್ನಡ ರಾಜ್ಯೋತ್ಸವ ನಿತ್ಯ ಆಚರಣೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್ 30. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ರಾಷ್ಟ್ರಕವಿ ಕುವೆಂಪು ಅವರು ತಿಳಿಸಿರುವಂತೆ ಪ್ರತಿ ನಿತ್ಯ ಕರ್ನಾಟಕ ರಾಜ್ಯದಲ್ಲಿ ಕನ್ನಡ ಹಬ್ಬ ನಡೆಯಲಿ ಇದಕ್ಕೆ ಸರ್ಕಾರದ ಯಾವುದೇ ಅಡ್ಡಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
  ಇಂದು ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಾಗ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಕ್ರಮದ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದರು.
  ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ವಿಶೇಷ ಆಸಕ್ತಿಯ ಮೇರೆಗೆ 15 ಮೇ 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ್ನು ಪ್ರಾರಂಭಿಸಲಾಯಿತು. 6 ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಈ ಪರಿಷತ್ತಿಗೆ 24 ಜನ ಅಧ್ಯಕ್ಷರು ಸೇವೆ ಸಲ್ಲಿಸಿ ಅವರ ಹೊಸ ಆಲೋಚನೆ ಹಾಗೂ ಶ್ರಮದಿಂದ ಪರಿಷತ್ತನ್ನು ಬೆಳೆಸಿದ್ದಾರೆ ಎಂದರು
  ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಗೋಷ್ಠಿಗಳಿಗೆ ತಮ್ಮ ಕೆಲಸವನ್ನು ಸೀಮಿತಗೊಳಿಸದೆ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೂ ಶ್ರಮಿಸಬೇಕು. ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಆಚರಣೆಗಾಗಿ ಆಯಾವ್ಯಯದಲ್ಲಿ ಅನುದಾನ ಘೋಷಿಸಲಾಗಿದೆ ಎಂದರು.
  ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಕನ್ನಡ ಮಾತನಾಡುವವರನ್ನು ಒಟ್ಟಾಗಿ ಸೇರಿಸಲು ಕರ್ನಾಟಕ ಏಕೀಕರಣ ಚಳುವಳಿ ನಡೆಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೊದಲು ಕನ್ನಡ ಕಾವಲು ಸಮಿತಿ ಕಾರ್ಯನಿರ್ವಹಿಸುತ್ತಿತ್ತು. ಆ ಸಂದರ್ಭದಲ್ಲಿ ಮಾತೃ ಭಾಷೆ ಹಾಗೂ ರಾಜ್ಯ ಭಾಷೆಯಾಗಿರುವ ಕನ್ನಡ ಭಾಷೆಗೆ ಕಾವಲಿನ ಅವಶ್ಯಕತೆ ಇದೆಯೇ ಎನ್ನಿಸುತ್ತಿತ್ತು. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ವಿಕಾಸಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅವಶ್ಯಕತೆ ಇದೆ ಎಂದ ಮುಖ್ಯಮಂತ್ರಿಗಳು ಪ್ರತಿಯೊಬ್ಬರು ಕನ್ನಡ ನಾಡು, ನುಡಿ, ಸಂಸ್ಕøತಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು ಸದಾ ಸಿದ್ಧರಿರಬೇಕು ಎಂದರು.
  ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುವವರನ್ನು ಸಮಾಜ ಕೂಡ ಖಂಡಿಸುತ್ತದೆ. ಕಲ್ಬುರ್ಗಿ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತ ಹಚ್ಚಲು ಸರ್ಕಾರ ಕಾರ್ಯನಿರತವಾಗಿದೆ. ಸಾಹಿತಿಗಳಿಗೆ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ಹಿಂದಿರುಗಿಸಬಾರದು ಎಂದರು.
ಸಮಾಜದ ಪ್ರಗತಿಗೆ ಮಾರಕವಾಗಿರುವ ಮೂಡನಂಬಿಕೆಗಳ ಆಚರಣೆಗಳನ್ನು ನಿಷೇಧಿಸಲು ಸರ್ಕಾರ ಮೂಡನಂಬಿಕೆ ವಿರೋಧ ಕಾಯ್ದೆ ಜಾರಿಗೆ ತರಲು ಚಿಂತಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗುತ್ತಿದೆ ಎಂದರು.
 ಇದೇ ಸಂದರ್ಭದಲ್ಲಿ ಡಾ|| ದೇ.ಜವರೇಗೌಡ, ಡಾ|| ಸಿ.ಪಿ.ಕೃಷ್ಣಕುಮಾರ್, ರಾಜಶೇಖರ್ ಕೋಟಿ, ಕೃಷ್ಣ, ಕೆ.ಸಿ.ಶಿವಪ್ಪ, ಡಾ ಲತಾ ರಾಜಶೇಕರ್, ಡಾ|| ಮಂಜುಳಾ ಮಾನಸ,  ಜಿ.ಟಿ.ದೇವೇಗೌಡ ಹಾಗೂ ಇನ್ನಿತರ ಗಣ್ಯರಿಗೆ ಶತಮಾನೋತ್ಸವ ಗೌರವ ಸಲ್ಲಿಸಲಾಯಿತು.
 ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ ಜಿ.ಎಸ್.ಸಿದ್ದಲಿಂಗಯ್ಯ,  ಅಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಶಾಸಕ ವಾಸು, ಸೋಮಶೇಖರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ ಪುಷ್ಪ ಅಮರನಾಥ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.



ಕಲಾಕೃತಿ ಆಹ್ವಾನ
ಮೈಸೂರು, ಅಕ್ಟೋಬರ್ 30. ದಸರಾ ವಸ್ತು ಪ್ರದರ್ಶನ-2015 ರ ಲಲಿತಕಲೆ ಮತ್ತು ಕರಕುಶಲ ಕಲಾ ವಿಭಾಗವು  ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕಲಾಕೃತಿಗಳನ್ನು ಆಹ್ವಾನಿಸಿದೆ. ಆಸಕ್ತರು ಕನ್ನಡ ಕಾರಂಜಿ ಕಟ್ಟಡದಲ್ಲಿರುವ ಲಲಿತಕಲಾ ವಿಭಾಗದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಹಾಗೂ ಕಲಾಕೃತಿಗಳನ್ನು ದಿನಾಂಕ 04.11.2015 ರ ಒಳಗಾಗಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರ ವರೆಗೆ ನೀಡಬಹುದು ಎಂದು ಲಲಿತ ಕಲೆ ಮತ್ತು ಕರಕುಶಲ ವಿಭಾಗದ ಸದಸ್ಯ ಕಾರ್ಯದರ್ಶಿ ಶಿವಕುಮಾರ್ ಅವರು ತಿಳಿಸಿದ್ದಾರೆ.
ಮುದ್ರ ಯೋಜನೆಯಡಿ ಸಾಲ ಸೌಲಭ್ಯ
ಮೈಸೂರು, ಅಕ್ಟೋಬರ್ 30. ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಐಟಿಐ ಕೌಶಲ್ಯ ತರಬೇತಿ ಪಡೆಸು ಸ್ವಂತ ಉದ್ಯಮ ಪ್ರಾರಂಭಿಸಲು ಹಾಗೂ ಈಗಾಗಲೇ ಇರುವ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ಈ ಸೌಲಭ್ಯ ಎಲ್ಲಾ ಬ್ಯಾಂಕುಗಳಲ್ಲೂ ಲಭ್ಯವಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗದು ಬಹುಮಾನ: ಕ್ರೀಡಾ ಸಂಚಲಕರನ್ನು ಸಂಪರ್ಕಿಸಿ
ಮೈಸೂರು, ಅಕ್ಟೋಬರ್ 30 (ಕರ್ನಾಟಕ ವಾರ್ತೆ):- ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಿನಾಂಕ 19-10-2015 ರಂದು ನಡೆದ 2015ನೇ ಜಿಲ್ಲಾ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 200-00, ದ್ವಿತೀಯ ಸ್ಥಾನ ಪಡೆದವರಿಗೆ 150-00 ಮತ್ತು ತೃತೀಯ ಸ್ಥಾನ ಪಡೆದವರಿಗೆ 100-00 ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 200-00 ದ್ವಿತೀಯ ಸ್ಥಾನ ಪಡೆದವರಿಗೆ 150-00 ಗಳ ನಗದು ಬಹುಮಾನ ನೀಡಲಾಗುವುದು.
  ವಿಜೇತ ಕ್ರೀಡಾಪಟುಗಳು ಕ್ರೀಡಾ ವಿಭಾಗದ ಸಂಚಾಲಕರನ್ನು ಸಂಪರ್ಕಿಸಿ ನಗದು ಬಹುಮಾನ ಪಡೆದುಕೊಳ್ಳುವುದ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179 ಯನ್ನು ಸಂಪರ್ಕಿಸುವುದು.
ಟಿಪ್ಪು ಸುಲ್ತಾನ್ ಜನ್ಮದಿನ ಅಚರಣೆ: ಅಕ್ಟೋಬರ್ 31 ರಂದು ಸಭೆ
ಮೈಸೂರು, ಅಕ್ಟೋಬರ್ 30. ಮೈಸೂರು ಹುಲಿ ಹಜûರತ್ ಟಿಪ್ಪು ಸುಲ್ತಾನ್ ಅವರ ಜನ್ಮದಿನಾಚರಣೆ ಅಚರಿಸುವ ಸಂಬಂಧ ಅಕೋಟ್ಬರ್ 31 ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.


No comments:

Post a Comment