Monday 21 September 2015

ದಸರಾ ಈ ಬಾರಿ ಸರಳ, ಸಾಂಪ್ರದಾಯಿಕ :ಶ್ರೀನಿವಾಸ್ ಪ್ರಸಾದ್.

ದಸರಾ ಈ ಬಾರಿ ಸರಳ, ಸಾಂಪ್ರದಾಯಿಕ : V. Srinivas Prasad 

ಬೆಂಗಳೂರು, ಸೆಪ್ಟೆಂಬರ್ ೨೨.
ರಾಜ್ಯದಲ್ಲಿ ಮುಂಗಾರು ವಿಫಲವಾಗಿ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರ ಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ, ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಂದಾಯ ಸಚಿವ ಶ್ರೀ ವಿ. ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದರು. 
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ದಸರಾ ಮಹೋತ್ಸವಕ್ಕೆ ಅಧಿಕೃತ ಆಮಂತ್ರಣ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪ್ರಗತಿಪರ ರೈತನಿಂದ ದಸರಾ ಉದ್ಘಾಟನೆ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶರನ್ನವರಾತ್ರಿಯ ಮೊದಲನೆಯ ದಿನದಂದು ಮುಖ್ಯಮಂತ್ರಿಯವರ ಜೊತೆಗೆ ಪ್ರಗತಿಪರ ರೈತರೋರ್ವರನ್ನು ಆಮಂತ್ರಿಸಿ, ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ಸಂಜೆ, ಮೈಸೂರು ಅರಮನೆಯ ಆವರಣದಲ್ಲಿ ನಡೆಯಲಿರುವ ದಸರಾ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲೂ, ಕಲಾವಿದರಿಗೆ ರೈತರಿಂದ ಸನ್ಮಾನ ಮಾಡಲಾಗುವುದು. ಈ ಬಾರಿಯ ದಸರಾ ಸಂದರ್ಭದಲ್ಲಿ ರಾಜ್ಯದ ಹೊರಗಿನ ಕಲಾವಿದರಿಗೆ ಆಮಂತ್ರಣ ನೀಡುತ್ತಿಲ್ಲ. ಎಲ್ಲಾ ಕಾರ್ಯಕ್ರಮಗಳನ್ನೂ ಸಂಪೂರ್ಣವಾಗಿ ಸ್ಥಳೀಯ ಕಲಾವಿದರೇ ನಡೆಸಿಕೊಡಲಿದ್ದಾರೆ.
ದಸರಾ ಸಂದರ್ಭದಲ್ಲಿ ಈ ಹಿಂದೆ, ಇಡೀ ಮೈಸೂರು ನಗರಕ್ಕೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ವಿಜಯ ದಶಮಿಯ ದಿನದಂದು ದಸರಾ ಮೆರವಣಿಗೆ ಸಾಗುವ ರಸ್ತೆಗಳಿಗೆ ಮಾತ್ರ ದೀಪಾಲಂಕಾರ ಮಾಡಲಾಗುವುದು. ರಾಜ್ಯಪಾಲ ಶ್ರೀ ವಜುಭಾಯಿ ರುಢಾಭಾಯಿ ವಾಲಾ ಅವರು ಆ ದಿನ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ. ಈ ಬಾರಿ ಬಾಣಬಿರುಸುಗಳ ಪ್ರದರ್ಶನ ಇರುವುದಿಲ್ಲ. ಕಳೆದ ಬಾರಿ ದಸರಾ ಮಹೋತ್ಸವಕ್ಕೆ 15 ಕೋಟಿ ರೂ ವೆಚ್ಚ ಮಾಡಲಾಗಿತ್ತು. ಆದರೆ, ಈ ಬಾರಿ ಈ ವೆಚ್ಚವನ್ನು ಕೇವಲ ನಾಲ್ಕು ಕೋಟಿ ರೂ ಗಳಿಗೆ ಮಿತಿಗೊಳಿಸಲಾಗಿದೆ ಎಂದು ಶ್ರೀ ಶ್ರೀನಿವಾಸ ಪ್ರಸಾದ್ ಅವರು ವಿವರಿಸಿದರು.
ಸರ್ಕಾರದ ಈ ಕ್ರಮ ಪ್ರವಾಸೋದ್ಯಮಕ್ಕೆ ಮಾರಕವಾಗುವುದಿಲ್ಲವೇ ? ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬರದ ಹಿನ್ನೆಲೆಯಲ್ಲಿ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದಕಾರಣ, ಮಾನವೀಯತೆಯ ದೃಷ್ಠಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಲ್ಲಿ ಲಾಭ-ನಷ್ಟಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಸಹಕಾರ ಮತ್ತು ಸಕ್ಕರೆ ಸಚಿವ ಶ್ರೀ ಹೆಚ್. ಎಸ್. ಮಹದೇವ ಪ್ರಸಾದ್, ಶಾಸಕರಾದ ಶ್ರೀ ತನ್ವೀರ್ ಸೇಠ್, ಶ್ರೀ ಎಂ. ಕೆ. ಸೋಮಶೇಖರ್, ಶ್ರೀ ಕೆ. ವೆಂಕಟೇಶ್, ಶ್ರೀ ಧರ್ಮಸೇನಾ, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಶ್ರೀಮತಿ ಶಿಖಾ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶ್ರೀ ಬೆಟ್ಟಸೂರ್ಮಠ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು

No comments:

Post a Comment