Saturday 29 August 2015

ಬಿಎಸ್‍ಎನ್‍ಎಲ್ ಸೇವೆ ಚುರುಕುಗೊಳಿಸಲು ಸಂಸದರ ಸೂಚನೆ

ಬಿಎಸ್‍ಎನ್‍ಎಲ್ ಸೇವೆ ಚುರುಕುಗೊಳಿಸಲು ಸಂಸದರ ಸೂಚನೆ
     ಮಂಡ್ಯ, ಆ. 29. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸೇವೆಯನ್ನು ಸಮರ್ಪಕವಾಗಿ ಗ್ರಾಹಕರಿಗೆ ಒದಗಿಸಲು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಮಂಡ್ಯ ಸಂಸದರಾದ ಸಿ.ಎಸ್.ಪುಟ್ಟರಾಜು ಅವರು ಸೂಚನೆ ನೀಡಿದರು.
ಶನಿವಾರ ಬಿ.ಎಸ್.ಎನ್.ಎಲ್. ಕಚೇರಿಯಲ್ಲಿ ನಡೆದ ದೂರಸಂಪರ್ಕ ಸಲಹಾ ಸಮಿತಿ ಸಭೆ ನಡೆಸಿದ ಅವರು, ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಅತ್ಯುತ್ತಮವಾಗಿದ್ದರೂ ನೌಕರರ ಕಾರ್ಯವೈಖರಿಯ ಪರಿಣಾಮ ಸಾರ್ವಜನಿಕರಿಗೆ ಈ ನೆಟ್‍ವರ್ಕ್ ಬಗ್ಗೆ ಬೇಸರವಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್‍ಎನ್‍ಎಲ್ ಬಗ್ಗೆ ಹಲವಾರು ದೂರುಗಳಿವೆ. ಖಾಸಗಿ ಒಡೆತನದ ನೆಟ್‍ವರ್ಕ್‍ಗಳು ದೂರು ನೀಡಿದ ತಕ್ಷಣವೇ ಸ್ಪಂದಿಸುತ್ತಾರೆ. ಆದರೆ ಬಿಎಸ್‍ಎನ್‍ಎಲ್‍ಗೆ ದೂರು ನೀಡಿದರೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ನನಗೂ ವೈಯಕ್ತಿಕ ಅನುಭವ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿವೆ. ಮಂಡ್ಯ ತಾಲ್ಲೂಕು ಬಸರಾಳು ಹೋಬಳಿಯ ಗ್ರಾಮವೊಂದರಲ್ಲಿ ಇರುವ ದೂರವಾಣಿ ಎಕ್ಸ್‍ಚೇಂಜ್ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದಿದ್ದಾಗ ದೂರಸಂಪರ್ಕ ಕೂಡ ಸ್ಥಗಿತವಾಗುತ್ತಿದೆ. ಈ ರೀತಿಯ ಸೇವೆಯಿಂದ ವಿಶ್ವಾಸಾರ್ಹತೆ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೇವೆ ಅಳವಡಿಸಬೇಕು. ಮೇಲುಕೋಟೆ, ವಿಶ್ವವಿಖ್ಯಾತ ಬೃಂದಾವನ ಗಾರ್ಡನ್, ಬಸ್ ನಿಲ್ದಾಣಗಳು, ಮುಂತಾದ ಸ್ಥಳಗಳಲ್ಲಿ ಈ ಸೌಲಭ್ಯ ಕಲ್ಪಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೆರೆ ತೊಣ್ಣೂರನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಈ ಸ್ಥಳದಲ್ಲೂ ವೈ-ಫೈ ಸೇವೆ ದೊರಬೇಕು ಎಂದು ಸಂಸದರು ತಿಳಿಸಿದರು.
ಮಂಡ್ಯ ನಗರದ ಚಾಮುಂಡೇಶ್ವರಿ ನಗರದಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಿ.ಇ.ಎಸ್. ಕಾಲೇಜಿನ ಹತ್ತಿರ ಇರುವ ಟವರ್‍ನಿಂದ ಇಲ್ಲಿ ಸಂಪರ್ಕ ದೊರೆಯುತ್ತದೆ. ಇದರ ಸಂಪರ್ಕದ ಕಾರ್ಯಕ್ಷಮತೆ ಹೆಚ್ಚಿಸಬೇಕು ಅಥವಾ ಚಾಮುಂಡೇಶ್ವರಿ ನಗರಕ್ಕೆ ಪ್ರತ್ಯೇಕ ಟವರ್ ಅಳವಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮಂಡ್ಯ ದೂರಸಂಪರ್ಕ ಜಿಲ್ಲಾ ಪ್ರಬಂಧಕರಾದ ಆನಂದ್ ದೇವಪ್ರಸಾದ್, ಡಿಜಿಎಂ(ಮೊಬೈಲ್) ರವೀಂದ್ರನಾಥ್, ಎಜಿಎಂ(ಮೊಬೈಲ್) ಶ್ರೀನಾಥ್, ಶಂಕರನಾರಾಯಣ್, ಉಪ ವಿಭಾಗೀಯ ಇಂಜಿನಿಯರ್‍ಗಳಾದ ಕೃಷ್ಣ, ಸುವರ್ಣ ಮೂರ್ತಿ, ಸುನೀತಾ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment