Monday 17 August 2015

. ದೇವರಾಜ ಅರಸು ಶತಮಾನೋತ್ಸವ ಆಚರಣೆ : ಸ್ಥಳ ಪರಿಶೀಲನೆ

. ದೇವರಾಜ ಅರಸು ಶತಮಾನೋತ್ಸವ ಆಚರಣೆ : ಸ್ಥಳ ಪರಿಶೀಲನೆ
    ಮೈಸೂರು,ಆ.17.ಡಿ.ದೇವರಾಜ ಅರಸು ಅವರ ಶತಮಾನೋತ್ಸವ ವೇದಿಕೆ ಕಾರ್ಯಕ್ರಮ ಆಗಸ್ಟ್ 20 ರಂದು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಈ ಕುರಿತು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಇಂದು ಸ್ಥಳ ಪರಿಶೀಲನೆ ನಡೆಸಿದರು.
     ಈ ಪರಿಶೀಲನೆಯ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಉಂಟಾಗದಂತೆ ಸುಸೂತ್ರವಾಗಿ ನಡೆಯಬೇಕು, ಅಧಿಕಾರಿಗಳು ಈಗಾಗಲೇ ಪೂರ್ವ ಸಿದ್ದತಾ ಸಭೆಯಲ್ಲಿ ಸೂಚಿಸಿರುವ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ತಿಳಿಸಿದರು.
     ಆಹ್ವಾನ ಪತ್ರಿಕೆಗಳನ್ನು ಎಲ್ಲಾ ಗಣ್ಯರಿಗೆ ತಲುಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ವೇದಿಕೆ ಆಕರ್ಷಿತವಾಗಿ ನಿರ್ಮಾಣವಾಗಬೇಕು. ವೇದಿಕೆಯಲ್ಲಿ  ಎಲ್‍ಇಡಿ ಸ್ಕ್ರೀನ್ ಅಳವಡಿಸಿ ಅದರಲ್ಲಿ ಅರಸು ಅವರ ಭಾವಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವಂತೆ ತಿಳಿಸಿದರು.
    ಆಗಸ್ಟ್ 18 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶತಮಾನೋತ್ಸವ ಲಾಂಛನ ಬಿಡುಗಡೆ ಮಾಡಲಾಗುವುದು ಎಂದ ಅವರು ಲಾಂಛನ ವಿನ್ಯಾಸವನ್ನು ಪರಿಶೀಲಿಸಿದರು.  ವಾಹನ ನಿಲುಗಡೆಗೆ ಗಣ್ಯರು, ಅತಿಗಣ್ಯರು ಹಾಗೂ ಸಾರ್ವಜನಿಕರಿಗೆ ಮೂರು ಸ್ಥಳಗಳಲ್ಲಿ ವ್ಯವಸ್ಥೆ ಮಾಡುವಂತೆ ಹಾಗೂ ಮೂರು ಪ್ರವೇಶ ದ್ವಾರಗಳ ವ್ಯವಸ್ಥೆ ಮಾಡುವಂತೆ ತಿಳಿಸಿದರು.
     ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಮಾತನಾಡಿ ಕಾರ್ಯಕ್ರಮದಲ್ಲಿ 10,000 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 20 ರಂದು ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆಯ ನಂತರ 2015 ಆಗಸ್ಟ್ 20 ರಿಂದ 2016ರ ಆಗಸ್ಟ್ 19 ರವರೆಗೆ ವಿವಿಧ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
     ಪರಿಶೀಲನೆಯ ವೇಳೆ ಮಾಜಿ ಸಂಸದ  ವಿಶ್ವನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾಧಿಕಾರಿಗಳ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ. ಗೋಪಾಲ್, ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಗಿರಿಜನ ಅಭಿವೃದ್ಧಿ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಭಾರತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

     ಮೈಸೂರು,ಆ.17-ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳಿಗೆ ಗ್ರಾಮಸಭೆ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.
     ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್.ಸಿ.ಎಸ್.ಪಿ ಹಾಗೂ ಟಿ ಎಸ್ ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಇಲಾಖೆ ಅಧಿಕಾರಿಗಳು ಮಾರ್ಚ್ 2016 ರ ಅಂತ್ಯದಲ್ಲಿ ತರಾತುರಿಯಲ್ಲಿ ನಿಗಧಿಪಡಿಸಿರುವ ಗುರಿಯನ್ನು ಪೂರ್ಣಗೊಳಿಸುವ ಬದಲು ಜನವರಿ 2016 ರೊಳಗಾಗಿ ನಿಗಧಿಪಡಿಸಿರುವ ಗುರಿಯನ್ನು ಎಲ್ಲಾ ಇಲಾಖೆಗಳು ಸಾಧಿಸಬೇಕು ಎಂದರು.
     ಆಯುಷ್ ಇಲಾಖೆಯಲ್ಲಿ ಈ ಸಾಲಿನಿಂದ 50 ಸಂಖ್ಯೆ ವಿದ್ಯಾರ್ಥಿಗಳಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ. ಒಟ್ಟು 8 ಹಾಸ್ಟೆಲ್‍ಗಳಲ್ಲಿ ಆರೋಗ್ಯ ಶಿಬಿರ ನಡೆಸಲು ರೂ. 1,60,000 ಅನುದಾನ  ನಿಗಧಿಯಾಗಿದೆ. ಒಂದು ಶಿಬಿರಕ್ಕೆ ರೂ. 50 ಸಾವಿರ ವೆಚ್ಚ ಮಾಡಲು ಅವಕಾಶವಿದ್ದು,  ಆಯುಷ್ ಇಲಾಖೆಯವರು ಆಯುರ್ವೇದ ಕಾಲೇಜಿನ ಸಹಯೋಗದೊಂದಿಗೆ ಶಿಬಿರ ಆಯೋಜಿಸಿದರೆ ಶಿಬಿರದ ವೆಚ್ಚ ಕಡಿಮೆಯಾಗಲಿದ್ದು, 8 ಕ್ಕಿಂತ  ಹೆಚ್ಚಿನ ಶಿಬಿರ ಆಯೋಜಿಸಬಹುದು ಎಂದರು.
    ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು 2012-13, 2013-14 ಹಾಗೂ 2014-15ನೇ ಸಾಲಿನ 1321.20 ಲಕ್ಷ ಮೊತ್ತದ 82 ಕಾಮಗಾರಿಗಳ ಪೈಕಿ 23 ಕಾಮಗಾರಿಗಳು ಮುಕ್ತಾಯವಾಗಿದ್ದು, 65 ಕಾಮಗಾರಿ ಪ್ರಗತಿಯಲ್ಲಿದೆ. ಅಕ್ಟೋಬರ್ ಅಂತ್ಯದೊಳಗಾಗಿ ನಿಗಧಿಪಡಿಸಿರುವ ಗುರಿ ಸಾಧಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾ ನಗರಾಭಿವೃದ್ಧಿ ಕೋಶದವರು ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆದು ಕಾಮಗಾರಿಗಳು ಪೂರ್ಣಗೊಳಿಸಲು ಸಲಹೆ ಹಾಗೂ ಸೂಚನೆ ನೀಡುವಂತೆ ತಿಳಿಸಿದರು.
     ರೇಷ್ಮೆ ಇಲಾಖೆ ಅಧಿಕಾರಿಗಳು ಮಾತನಾಡಿ ಜಿಲ್ಲೆಯಲ್ಲಿ ಹೊಸದಾಗಿ 45 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ಕುಸಿತವಾಗಿದ್ದ ರೇಷ್ಮೆ ಬೆಲೆಯಲ್ಲಿ ಸುಧಾರಣೆ  ಕಂಡುಬಂದಿದೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಬೀಜ ಉತ್ಪಾದಕ ಸಂಸ್ಥೆಗಳಾದ ಎನ್‍ಎಸ್‍ಎಸ್‍ಒ ಹಾಗೂ ಎಲ್‍ಎಸ್‍ಪಿ ಉತ್ತಮ ಬೆಲೆ ನೀಡಿ ರೇಷ್ಮೆ ಖರೀದಿಸುತ್ತಿದ್ದಾರೆ. ಇಲಾಖೆಯಿಂದ 60 ಕೆ.ಜಿ.ಕ್ಕಿಂತ ಹೆಚ್ಚು ರೇಷ್ಮೆ ಬೆಳೆಯುವವರಿಗೆ ಪ್ರತಿ ಕೆ.ಜಿ.ಗೆ ರೂ. 50/- ಸಹಾಯ ಧನ ನೀಡಲಾಗುತ್ತಿದೆ ಎಂದರು.
     ಮೀನುಗಾರಿಕೆ ಇಲಾಖೆ ಅಧಿಕಾರಿಗಳು ವಿಶೇಷ ಎಸ್.ಸಿ., ಎಸ್.ಟಿ. ಯೋಜನೆಯಡಿ 35 ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆಗೆ ರೂ. 2.80 ಲಕ್ಷ ಹಾಗೂ 18 ಫಲಾನುಭವಿಗಳಿಗೆ ರೂ. 1.44 ಲಕ್ಷ ವೆಚ್ಚದಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟು ಮತ್ತು ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಕಾರ್ಯಕ್ರಮ ಇದೆ. ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಮೀನುಗಾರಿಕೆ ಇಲಾಖೆ ಕೇಂದ್ರ ಕಚೇರಿಯಿಂದ ಏಜೆನ್ಸಿ ನಿಗಧಿಪಡಿಸಿದ ಕೂಡಲೇ ಫಲಾನುಭವಿಗಳಿಗೆ ಸಲಕರಣೆ  ವಿತರಿಸಿ ಗುರಿ ಸಾಧಿಸಲಾಗುವುದು ಎಂದರು.
     ಶಾಸಕ ಸಾ.ರಾಮಹೇಶ್ ಅವರು ಮಾತನಾಡಿ ಸಾಮಾಜಿಕ ಅರಣ್ಯ ವಿಭಾಗದವರು ಶಾಸಕರ ಗಮನಕ್ಕೆ ತರದೇ ಫಲಾನುಭವಿಗಳನ್ನು ಆಯ್ಕೆ ಮಾಡುತಿರುವುದು ಕಂಡು ಬಂದಿದ್ದು, ಇನ್ನು ಮುಂದೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ  ಶಾಸಕರ ಗಮನಕ್ಕೆ ತರುವಂತೆ ತಿಳಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ. ಗೋಪಾಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಗಿರಿಜನ ಅಭಿವೃದ್ಧಿ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಭಾರತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬದಲಿ ವಾಹನ ಸಂಚಾರ ವ್ಯವಸ್ಥೆ
     ಮೈಸೂರು,ಆ.17. ಮೈಸೂರು ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿನ ಹೊಟೇಲ್ ಹೈವೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿನ ಹೊಟೇಲ್ ಹೈವೆ ವೃತ್ತದಿಂದ ಯಾದವಗಿರಿ ಜಾವಾ ಫ್ಯಾಕ್ಟರಿ ಕಡೆಗೆ ಸಾಗುವ ಜಾವಾ ಫ್ಯಾಕ್ಟರಿ ರಸ್ತೆಯಲ್ಲಿ ಹೊಟೇಲ್ ಹೈವೆ ವೃತ್ತದಿಂದ ಮೇದರ ಕೇರಿ ಮುಖ್ಯರಸ್ತೆ ಜಂಕ್ಷನ್ ವರೆಗಿನ ಭಾಗದ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿ ವಾಹನÀ ಸಂಚಾರವನ್ನು ನಿರ್ಬಂಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
     ಹೊಟೇಲ್ ಹೈವೆ ವೃತ್ತದಿಂದ ಜಾವಾ ಕಾರ್ಖಾನೆ ರಸ್ತೆ ಮೂಲಕ ಸಾಗುವ ಭಾರಿ ವಾಹನಗಳನ್ನು ಹೊರತು ಪಡಿಸಿ ಉಳಿದ ವಾಹನಗಳು ಹೊಟೇಲ್ ಹೈವೆ ವೃತ್ತದಿಂದ ದಕ್ಷಿಣಕ್ಕೆ ಸಾಗಿ ಗಣೇಶ ಸಾಮಿಲ್ ರಸ್ತೆಯಲ್ಲಿ ಬಲತಿರುವು ಪಡೆದು ಮೇದರ ಕೇರಿಯ ಮುಖ್ಯ ರಸ್ತೆಯ ಮೂಲಕ ಜಾವ ಫ್ಯಾಕ್ಟರಿ ಮುಖ್ಯ ರಸ್ತೆ ತಲುಪಿ ಮುಂದೆ ಸಾಗುವುದು. ಭಾರಿ ವಾಹನಗಳು ಜೋಡಿ ತೆಂಗಿನ ಮರದ ರಸ್ತೆಯಲ್ಲಿ ಸಾಗಿ ರಿಂಗ್ ರಸ್ತೆ ತಲುಪಿ ಮುಂದೆ ಸಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.



ಬದಲಿ ವಾಹನ ಸಂಚಾರ ವ್ಯವಸ್ಥೆ
      ಮೈಸೂರು,ಆ.17.ಮೈಸೂರು ನಗರದ ಗನ್‍ಹೌಸ್ ಹತ್ತಿರ ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಸೇತುವೆಯ ಪುನರ್ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿರುತ್ತದೆ.  ಬಿ.ಎನ್. ರಸ್ತೆಯ ಚೆನ್ನಯ್ಯ ಕುಸ್ತಿ ಅಖಾಡದ ಜಂಕ್ಷನ್ ಬಳಿ ನಂಜನಗೂಡು ರಸ್ತೆಗೆ ತಿರುವು ಪಡೆಯುವ ಜಂಕ್ಷನ್‍ನಿಂದ ದಕ್ಷಿಣಕ್ಕೆ ಗನ್ ಹೌಸ್ ರಸ್ತೆ ಸಂದಿಸುವ ವರೆಗಿನ ಭಾಗದ ರಸ್ತೆಯು ಏಕಮುಖ ವಾಹನ ಸಂಚಾರದ ರಸ್ತೆಯಾಗಿದ್ದು, ಈ ಭಾಗದ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
     ನಿರ್ಬಂಧಿಸಿದ ಭಾಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಚೆನ್ನಯ್ಯ ಕುಸ್ತಿ ಅಖಾಡ ಜಂಕ್ಷನ್‍ನಿಂದ ಪಶ್ಚಿಮಕ್ಕೆ ನೇರವಾಗಿ ಸಾಗಿ ಗನ್ ಹೌಸ್ ವೃತ್ತದಲ್ಲಿ ಎಡತಿರುವು ಪಡೆದು ನಂಜನಗೂಡು ರಸ್ತೆಯನ್ನು ತಲುಪಿ ಮುಂದೆ ಸಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಬದಲಿ ವಾಹನ ಸಂಚಾರ ವ್ಯವಸ್ಥೆ
     ಮೈಸೂರು,ಆ.17.ಮೈಸೂರು ನಗರದ ರಾಜ್ಯಮಾರ್ಗ ಕಾಮಗಾರಿ ಸಂಬಂಧ ಸಯ್ಯಾಜಿರಾವ್ ರಸ್ತೆಯ ಓಲ್ಡ್ ಬ್ಯಾಂಕ್ ರಸ್ತೆ ಕತ್ತರಿಸುವ ಕಾಮಗಾರಿಯನ್ನು ಮೈಸೂರು ಮಹಾನಗರ ಪಾಲಿಕೆಯವರು ಕೈಗೊಂಡಿರುತ್ತಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆ ಓಲ್ಡ್ ಬ್ಯಾಂಕ್ ರಸ್ತೆಯಲ್ಲಿ ಸಯ್ಯಾಜಿರಾವ್ ರಸ್ತೆ ಜಂಕ್ಷನ್ ನಿಂದ ಪೂರ್ವಕ್ಕೆ ಬೆಂಕಿನವಾಬ ರಸ್ತೆ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
     ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಯಿಂದ ಸಯ್ಯಾಜಿರಾವ್ ರಸ್ತೆ ತಲುಪುತಿದ್ದ ವಾಹನಗಳು ಹೊಟೇಲ್ ದಾಸ್ ಪ್ರಕಾಶ್ ವೃತ್ತದಿಂದ ಹನುಮಂತರಾವ್ 1ನೇ ರಸ್ತೆಯಲ್ಲಿ ದಕ್ಷಿಣಕ್ಕೆ ಸಾಗಿ ಶಿವರಾಂ ರಸ್ತೆ ಮೂಲಕ ಸಯ್ಯಾಜಿರಾವ್ ರಸ್ತೆ ತಲುಪುವುದು. ಸಯ್ಯಾಜಿರಾವ್ ರಸ್ತೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಗೆ ಸಂಚರಿಸುತ್ತಿದ್ದ ವಾಹನಗಳು ಕೆ.ಎಸ್.ಆರ್.ಟಿ.ಸಿ. ನಗರ ಸಾರಿಗೆ ಸಂಸ್ಥೆಯ ವಾಹನಗಳನ್ನು ಹೊರತುಪಡಿಸಿ ಸಯ್ಯಾಜಿರಾವ್ ರಸ್ತೆಯಿಂದ ಕೆ.ಆರ್ ಆಸ್ಪತ್ರೆ ರಸ್ತೆ ಮೂಲಕ ಬೆಂಕಿನವಾಬ ರಸ್ತೆ ತಲುಪಿ ಮುಂದೆ ಸಾಗುವುದು. ಸಯ್ಯಾಜಿರಾವ್ ರಸ್ತೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ನಗರ ಸಾರಿಗೆ ಸಂಸ್ಥೆಯ ವಾಹನಗಳು ಆಯುರ್ವೇಧಿಕ್ ಆಸ್ಪತ್ರೆ ವೃತ್ತದಿಂದ ನೇರವಾಗಿ ಇರ್ವಿನ್ ರಸ್ತೆಯಲ್ಲಿ ಸಂಚರಿಸಿ ನೆಹರು ವೃತ್ತ-ಅಶೋಕ ರಸ್ತೆ ಮೂಲಕ ಸಂಚರಿಸಿ ದೊಡ್ಡ ಗಡಿಯಾರ ವೃತ್ತ ತಲುಪಿ ಮುಂದೆ ಸಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಫೋನ್ ಇನ್ ಕಾರ್ಯಕ್ರಮ ರದ್ದು
    ಮೈಸೂರು,ಆ.17.ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಗಸ್ಟ್ 20 ರಂದು ನಡೆಯಬೇಕಿದ್ದ ಫೋನ್ ಇನ್ ಕಾರ್ಯಕ್ರಮ ಸದರಿ ದಿನದಂದು ಮಾನ್ಯ ಮುಖ್ಯಮಂತ್ರಿಗಳು ಮೈಸೂರು ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರದ್ದುಪಡಿಸಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಭಾರತ ಮಹಿಳಾ ಕೃಷಿ ಜಾಗೃತಿ ಕಾರ್ಯಾಗಾರ
   ಮೈಸೂರು,ಆ.17.ಸಿಎಸ್‍ಐಆರ್  ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ವತಿಯಿಂದ ಆಗಸ್ಟ್ 19 ರಂದು ಬೆಳಿಗ್ಗೆ 9-30ಕ್ಕೆ ಸಿಎಫ್‍ಟಿಆರ್‍ಐನ ಐಎಫ್‍ಎಫ್‍ಟಿಟಿಸಿ ಸಭಾಂಗಣದಲ್ಲಿ ದಕ್ಷಿಣ ಭಾರತ ಮಹಿಳಾ ಕೃಷಿ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
     ಮಹಿಳಾ ಆದಾಯೋತ್ಪತ್ತಿ ಕೇಂದ್ರದ ಸಂಸ್ಥಾಪನಾ ಕಾರ್ಯದರ್ಶಿ ಇಂದಿರಾ ಓಯಿನಮ್ ಅವರು ಕಾರ್ಯಕ್ರಮ ಉದ್ಘಾಟಿಸಿ ಸ್ಮರಣಾ ಸಂಚಿಕೆ ಬಿಡುಗಡೆ ಮಾಡುವರು. ಐಎಸ್‍ಎಫ್‍ಎ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮಿದೇವಿ, ಐಎಸ್‍ಎಫ್‍ಎ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ನಿರ್ದೇಶಕ ರಾಮರಾಜಶೇಖರ್ ಹಾಗೂ ವಿಜ್ಞಾನಿ ಡಾ|| ಎಂ.ಸಿ. ವರದರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
    ಉದ್ಘಾಟನೆಯ ನಂತರ ಮಹಿಳಾ ಸಬಲೀಕರಣ ಕುರಿತು ವಿಡಿಯೋ ಚಿತ್ರಪ್ರದರ್ಶನ, ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ತಂತ್ರಜ್ಞಾನಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 4 ಗಂಟೆಗೆ ಕೃಷಿ ಉತ್ಪನ್ನಗಳ ಮೈಕ್ರೋ ಫೈನಾನ್ಸಿಂಗ್ ಹಾಗೂ ಮಾರಾಟ ಕಾರ್ಯಕ್ರಮ ನಡೆಯಲಿದೆ.
    ಈ ಕಾರ್ಯಕ್ರಮದಲ್ಲಿ  ಉದ್ಯಮಿಗಳಿಗೆ ಕೈಗಾರಿಕಾ ಸೇವೆಗಳು,  ಮಹಿಳಾ ಉದ್ಯಮಗಳಿಗೆ ಅವಕಾಶಗಳು, ಮಹಿಳಾ ಸಬಲೀಕರಣ, ಕೃಷಿ ಮಾರಾಟದಲ್ಲಿ ಮಹಿಳೆಯರ ಪಾತ್ರ ಕುರಿತು ಮಾಹಿತಿ ನೀಡಲಾಗುವುದು.

ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ
     ಮೈಸೂರು,ಆ.17.ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್. ಓಬಯ್ಯ ಮೂಲ್ಯ ಅವರಿಗೆ 2015ನೇ ಸಾಲಿನ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ದೊರಕಿದೆ. ಎಸ್. ಓಬಯ್ಯ ಮೂಲ್ಯ ಅವರು 14-03-1980 ರಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ನೇಮಕಾತಿಗೊಂಡು 2000 ಹಾಗೂ 2007ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿ ಬೆಳ್ಳಿ ಪದಕ ಮತ್ತು ಚಿನ್ನ ಪದಕ ಪುರಸ್ಕøತರಾಗಿರುತ್ತಾರೆ.
ಜಿಲ್ಲಾ ಮಟ್ಟದ ಕಾರ್ಯಾಗಾರ
ಮೈಸೂರು,ಆ.17.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ರೇಡಿಯೋಲಿಜ್ಟ್/ ಸೋನೋಲಿಜಿಸ್ಟ್/ ಮಕ್ಕಳ ತಜ್ಞರು/ಸ್ತ್ರೀ ಮತ್ತು ಪ್ರಸೂತಿ ತಜ್ಞರು/ ತಹಶೀಲ್ದಾರ್ ಹಾಗೂ ಖಾಸಗಿ ಆಸ್ಪತ್ರೆ ಮುಖ್ಯಸ್ಥರಿಗೆ ಆಗಸ್ಟ್ 19 ರಂದು ಬೆಳಿಗ್ಗೆ 10 ಗಂಟೆ ಜೆ.ಕೆ. ಗ್ರೌಂಡ್ಸ್ ನಲ್ಲಿರುವ ವೈದ್ಯಕೀಯ ಕಾಲೇಜು ಅಮೃತ ಮಹೋತ್ಸವ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಲಿದೆ.
ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸಿ.ಶಿಖಾ ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಬಸವರಾಜ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್ ಹೆಗ್ಡೆ, ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶಕ ಡಾ| ವಾಮ್‍ದೇವ್, ಉಪನಿರ್ದೇಶಕ ಡಾ| ರಾಮಚಂದ್ರಬಾಯರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ. ಗೋಪಾಲ್, ಜಿಲ್ಲಾ ಸಶಸ್ತ್ರ ಚಿಕಿತ್ಸಕ ಡಾ| ಎಂ.ಪಶುಪತಿ, ಐ.ಎಂ.ಎ. ಅಧ್ಯಕ್ಷ ಡಾ| ಕೆಂಪೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಭಾಗವಹಿಸಲಿದ್ದಾರೆ. 

No comments:

Post a Comment