Wednesday 11 May 2016

ಇಲಾಖೆಗೆ ಅಗತ್ಯ ಅನುದಾನ: ಮುಖ್ಯಮಂತ್ರಿ : ಸಿದ್ದರಾಮಯ್ಯ

 ಇಲಾಖೆಗೆ ಅಗತ್ಯ ಅನುದಾನ: ಮುಖ್ಯಮಂತ್ರಿ : ಸಿದ್ದರಾಮಯ್ಯ
        ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರೂಪಿಸುವ ಹೊಸ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
    ಅವರು ಇಂದು ಸೆನೆಟ್ ಭವನದಲ್ಲಿ ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಏಕಲವ್ಯ, ಜೀವಮಾನ ಸಾಧನೆ ಮತ್ತು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ ಕ್ರೀಡಾ ಶ್ರೇಷ್ಠತೆ ಸಹಾಯಧನ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಮುಂದಿನ ವರ್ಷಗಳಲ್ಲಿ ವಿಶ್ವ ಚಾಂಪಿಯನ್‍ಷಿಪ್, ಒಲಂಪಿಕ್ಸ್ ಹಾಗೂ ಮೊದಲಾದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಸಾಮಥ್ರ್ಯವಿರುವ ಹಾಗೂ ಈಗಾಗಲೇ ಉತ್ತಮ ಸಾಧನೆ ದಾಖಲಿಸಿ, ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಅವರ ಕ್ರೀಡೆಗೆ ಅನುಸಾರವಾಗಿ ಸಹಾಯಧನ ನೀಡಲಾಗುತ್ತಿದೆ. ಎಂದರು.
       ನಮ್ಮ ದೇಶ, ರಾಜ್ಯದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳಿಸಿದಾಗ ಆಗುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶದ ಹೆಸರನ್ನು ಪ್ರಜ್ವಲಗೊಳಿಸುವ ಕ್ರೀಡಾಪಟುಗಳು ನಮ್ಮ ದೇಶದ ಹೆಮ್ಮೆಯ ಮಕ್ಕಳು ಎಂದು ಶ್ಲಾಘಿಸಿದರು.
    ಕ್ರೀಡೆಗಳು ಸ್ಪರ್ಧಾತ್ಮಕ ಮನೋಭಾವ , ಆರೋಗ್ಯ, ಶಿಸ್ತು, ನಾಯಕತ್ವ ಗುಣ, ದೇಶಪ್ರೇಮದಂತಹ ಗುಣಗಳನ್ನು ಬೆಳೆಸುತ್ತದೆ. ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬ ಕ್ರೀಡಾಪಟುವು ಗೆಲ್ಲಲು ಸಾಧ್ಯವಿಲ್ಲ ಆದರೆ ವಿಶ್ವ ಚಾಂಪಿಯನ್‍ಷಿಪ್, ಒಲಂಪಿಕ್ಸ್ ಹಾಗೂ ಏಷಿಯನ್ ಗೇಮ್ಸ್‍ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಗೌರವ ಎಂದರು.
       ಮೈಸೂರು ಮಹಾನಗರಪಾಲಿಕೆ ಮಹಾಪೌರ ಬಿ.ಎಲ್ ಭೈರಪ್ಪ ಅವರು ಮೈಸೂರು ನಗರದ ಕೇಂದ್ರಸ್ಥಾನದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣವಿದ್ದು, ಎಲ್ಲ ಮಕ್ಕಳು ಆಟವಾಡಲು ಇಲ್ಲಿ ಬರಲು ಸಾಧ್ಯವಾಗುವುದಿಲ್ಲ. ಮೈಸೂರು ನಗರದ ಇತರೆ ಭಾಗಗಳಲ್ಲೂ ಕ್ರೀಡಾಂಗಣವಾಗಬೇಕು. ಶಾಸಕ ವಾಸು ಅವರು ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಿ ಹೊಸ ಯೋಜನೆಗಳನ್ನು ಕ್ರೀಡಾಪಟುಗಳಿಗೆ ರೂಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದಾಗ ಮುಖ್ಯಮಂತ್ರಿಗಳು ಇದಕ್ಕೆ ಪ್ರತಿಕ್ರಿಯಿಸಿ ನಗರ ಪ್ರದೇಶಗಳಲ್ಲಿರುವ ಶಾಲೆ ಹಾಗೂ ವಸತಿ ಪ್ರದೇಶಗಳಲ್ಲಿ ಆಟದ ಮೈದಾನದ ಕೊರತೆ ಇದೆ. ಕ್ರೀಡಾಂಗಣಕ್ಕೆ ಬೇಕಾಗುವ ಸ್ಥಳವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಒದಗಿಸಲು ಹಾಗೂ ಕ್ರೀಡಾಂಗಣದ ಅಭಿವೃದ್ಧಿ ಕೆಲಸವನ್ನು ಮೈಸೂರು ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಇನ್ನಿತರ ಇಲಾಖೆಗಳು ಒಗ್ಗೂಡಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಕ್ರೀಡಾ ಇಲಾಖೆಗೆ ಹೆಚ್ಚಿನ ನೆರವು ನೀಡಲಾಗುವುದು ಎಂದರು.
     ಕ್ರೀಡಾಪಟು ಅರವಿಂದ್ ಎಂ.,ಆಕಾಶ್ ಆರಾದ್ಯ, ಡಾ. ಖ್ಯಾತಿ ಎಸ್. ವಖಾರಿಯಾ , ಮಲಪ್ರಭಾ ವೈ. ಜಾದವ್, ಸುನ್ನುವಂಡ ಕುಶಾಲಪ್ಪ ಉತ್ತಪ್ಪ,   ಟ್ವಿಶಾ ಕೆ., ಪುರುಷೋತ್ತಮ ಕೆ,  ವಿನೀತ್ ಮ್ಯಾನ್ಯುಯಲ್, ಸುಷ್ಮಿತಾ ಪವಾರ್ ಓ, ಶರ್ಮದಾ ಬಾಲು, ಅರ್ಚನಾ ಗಿರೀಶ್ ಕಾಮತ್, ನಿಶಾ ಜೋಸೆಫ್, ಲೋಕೇಶ್ ಎನ್.,ಲಕ್ಷ್ಮಣ ಸಿ. ಕುರಣಿ,ನಿರಂಜನ್ ಎಂ. ಅವರುಗಳಿಗೆ ಏಕಲವ್ಯ ಪ್ರಶಸ್ತಿ 2014 ನ್ನು  ನೀಡಿ ಮುಖ್ಯಮಂತ್ರಿಗಳು ಗೌರವಿಸಿದರು. ಪ್ರಶಸ್ತಿಯು ರೂ 2.00 ಲಕ್ಷ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ.
     2014ರ ಜೀವನ ಪರ್ಯಂತ ಸಾಧನೆ ಪ್ರಶಸಿಯನ್ನು ಡಾ. ಪ್ರಭಾಕರ್ ಐ. ದೇವಾಂಗವಿ, ಹೆಚ್. ಚಂದ್ರಶೇಖರ್, ಶ್ರೀಧರ್ ಕುಮಾರ್, ಐ ಅಮಲ್‍ದಾಸ್ ಅವರುಗಳಿಗೆ ನೀಡಿ ಗೌರವಿಸಿದರು. ಈ ಪ್ರಶಸ್ತಿಯು ರೂ 1.50 ಲಕ್ಷ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ.

     ಕರ್ನಾಟಕ ರಾಜ್ಯದ ದೇಸೀ ಮತ್ತು ಸ್ಥಳೀಯ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2014 ನೇ ಸಾಲಿನ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿಯನ್ನು ಕಾವ್ಯ ಎಂ.ಆರ್.,ವಿನೋದ್ ರಾಠೋಡ, ದುಂಡಪ್ಪ ದಾಸನ್ನವರ, ರೂಪಶ್ರೀ ಬಿ.ಕೆ., ಕಾರ್ತಿಕ್ ಜಿ ಕಾಟಿ, ಯೋಗೇಶ್, ಅನಿಲ್ ಕುಮಾರ್ ಹೆಚ್. ಶೆಟ್ಟರ್, ಜಯಕರ ಯಾನೆ ನಕ್ರೆ ಜಯಕರ ಮಡಿವಾಳ, ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ಇಬ್ರಾಹಿಂ ಸಾಬ್ ಮ. ಅರಬ್ ಅವರಿಗೆ ಮುಖ್ಯಮಂತ್ರಿಗಳು ನೀಡಿದರು. ಈ ಪ್ರಶಸ್ತಿಯು ರೂ 1.00 ಲಕ್ಷ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.
     2015-16ಸಾಲಿನಲ್ಲಿ ಕ್ರೀಡಾ ಶ್ರೇಷ್ಠತಾ ಯೋಜನೆಯಡಿ ಸಹಾಯಧನ ಪಡೆಯಲು ಆಯ್ಕೆಯಾದ 41 ಕ್ರೀಡಾಪಟುಗಳಿಗೆ ಒಟ್ಟು ರೂ 1 ಕೋಟಿ 48 ಲಕ್ಷ ರೂ ವನ್ನು ವಿತರಿಸಲಾಯಿತು.
    ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ, ಶಾಸಕ ಸೋಮಶೇಖರ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

No comments:

Post a Comment