Sunday 3 May 2015

ಕೃಷ್ಣರಾಜಪೇಟೆ. ಕೆ.ಆರ್.ಪೇಟೆ ಪಟ್ಟಣದಲ್ಲಿ ದುಷ್ಕರ್ಮಿಯಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾದ 9 ವರ್ಷದ ಮುಸ್ಲಿಂ ಬಾಲಕಿ ಮೆಹಖ್‍ಬಾನು ಮತ್ತು ಇತ್ತೀಚೆಗೆ ಗುಡ್ಡೇನಹಳ್ಳಿಯ ಬಳಿ ಕಟ್ಟೆಯಲ್ಲಿ ಈಜಲು ಹೋಗಿ ಮೂವರೂ ಮಕ್ಕಳು ಜಲಸಮಾಧಿಯಾದ ಅಬ್ದುಲ್‍ಖಲೀಲ್ ಅವರ ಮನೆಗಳಿಗೆ ಇಂದು ಭೇಟಿ ನೀಡಿದ ಕೇಂದ್ರದ ಮಾಜಿಸಚಿವ ಕೆ.ರೆಹಮಾನ್‍ಖಾನ್ ಎರಡೂ ಕುಟುಂಬಗಳ ಪೋಷಕರು ಮತ್ತು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ದೊರೆಯುವ ಪರಿಹಾರ ಧನವನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿದರು.
ಅನಿರೀಕ್ಷಿತವಾಗಿ ಅಸಹಜವಾದ ಘಟನೆಗಳು ಸಂಭವಿಸಿ ಇಡೀ ಕುಟುಂಬಗಳು ನೋವಿನಲ್ಲಿ ಮುಳುಗಿವೆ. ನಾನು ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲು ನವದೆಹಲಿಯಲ್ಲಿ ಇದ್ದುದರಿಂದಾಗಿ ಅಂದು ಬರಲಾಗಲಿಲ್ಲ. ಆದ್ದರಿಂದ ಇಂದು ಬಿಡುವು ಮಾಡಿಕೊಂಡು ಹುಟ್ಟೂರಿಗೆ ಬಂದು ಎರಡೂ ಮುಸ್ಲಿಂ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಧೈರ್ಯವನ್ನು ತುಂಬಿದ್ದೇನೆ. ಪಟ್ಟಣದ ಸುಭಾಷ್‍ನಗರದಲ್ಲಿ ವಾಸವಾಗಿರುವ ಸಮೀಉಲ್ಲಾ ಅವರ ಮಗಳಾದ ಮೆಹಖ್‍ಬಾನು ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಈ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಅಮಾನುಶವಾಗಿ ಕೊಲೆ ಮಾಡಲಾಗಿದೆ. ಪೋಲಿಸರು ಆರೋಪಿಯನ್ನು ಬಂಧಿಸಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ, ನ್ಯಾಯಾಂಗವು ಇಂತಹ ಪಾಪಿಗಳ ಮೇಲೆ ಕರುಣೆತೋರದೇ ಗಲ್ಲು ಶಿಕ್ಷೆಯನ್ನು ನೀಡಬೇಕು, ಮಿಂಚಿನಂತೆ ಕಾರ್ಯನಿರ್ವಹಿಸಿರುವ ವೃತ್ತ ನಿರೀಕ್ಷಕ ಕೆ.ರಾಜೇಂದ್ರ ಮತ್ತು ಸಿಬ್ಬಂಧಿಗಳ ಕಾರ್ಯವೈಖರಿಯನ್ನು ರೆಹಮಾನ್‍ಖಾನ್ ಪ್ರಶಂಸಿಸಿದರು.
ಪಟ್ಟಣದ ಮುಸ್ಲಿಂ ಬ್ಲಾಕಿನಲ್ಲಿ ವಾಸವಾಗಿರುವ ಮಾವಿನಹಣ್ಣಿನ ವ್ಯಾಪಾರಿ ಅಬ್ದುಲ್‍ಖಲೀಲ್ ಅವರ 1ನೇ ಪುತ್ರ ಮಹಮ್ಮದ್‍ಫಿದರ್(9), 2ನೇ ಮಗ ಮಹಮ್ಮದ್‍ಕುರ್ಸಾನ್(7) ಹಾಗೂ ಮೂರನೇ ಪುತ್ರ ಮಹ್ಮಮದ್‍ಅಯಾನ್(5) ಮೂವರೂ ಸಹೋದರರು ಕಟ್ಟೆಯ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ. ಮಗುವನ್ನು ಅತ್ಯಾಚರವೆಸಗಿ ಕೊಲೆ ಮಾಡಿರುವ ಪಾನಿಪುರಿ ವ್ಯಾಪಾರಿ ಪ್ರಕಾಶ(35)ನನ್ನು ಕೆ.ಆರ್.ಪೇಟೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎರಡು ಮುಸ್ಲಿಂ ಕುಟುಂಬಗಳ ಮನೆಯಲ್ಲಿ ಶೋಖದ ಛಾಯೆಯು ಆವರಿಸಿದೆ. ದಯಾಮಯನಾದ ಅಲ್ಲಾಹನು ಎರಡೂ ಕುಟುಂಬಗಳಿಗೆ ದುಃಖ ಹಾಗೂ ನೋವನ್ನು ಮರೆಸುವ ಶಕ್ತಿಯನ್ನು ನೀಡಬೇಕಿದೆ ಎಂದು ಪ್ರಾರ್ಥಿಸಿದ ರೆಹಮಾನ್‍ಖಾನ್ ಸರ್ಕಾರದ ವತಿಯಿಂದ ದೊರೆಯಬಹುದಾದ ಪರಿಹಾರವನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಪುರಸಭಾ ಅಧ್ಯಕ್ಷ ಕೆ.ಗೌಸ್‍ಖಾನ್, ಮುಸ್ಲಿಂ ಸಮಾಜದ ಮುಖಂಡರಾದ ಓಬೇದುಲ್ಲಾಷರೀಫ್., ಕೆ.ಯೂನಸ್‍ಖಾನ್, ತಾಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ತಂಜೀಮಾಕೌಸರ್, ಡಿ.ಪ್ರೇಮಕುಮಾರ್, ಯುವಮುಖಂಡ ಶ್ರೀಧರ್ ಸಿರಿವಂತ್, ವೃತ್ತನಿರೀಕ್ಷಕ ಕೆ.ರಾಜೇಂದ್ರ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು.
  ಕೆ.ಆರ್.ಪೇಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ಅಬ್ದುಲ್‍ಖಲೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರದ ಮಾಜಿಸಚಿವ ಕೆ.ರೆಹಮಾನ್‍ಖಾನ್ ಇತ್ತೀಚೆಗೆ ಮೂವರೂ ಮಕ್ಕಳು ಈಜಲು ಹೋಗಿ ಜಲಸಮಾಧಿಯಾದ ಅಬ್ದುಲ್ ಖಲೀಲ್ ಮತುಲ್ಕೊಲೆಯಾದ ಬಾಲಕಿ ಮೆಹಕ್‍ಬಾನು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರದ ವತಿಯಿಂದ ವಿಶೇಷ ಧನಸಹಾಯವನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿದರು. ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮತ್ತಿತರರು ಚಿತ್ರದಲ್ಲಿದ್ದಾರೆ.

No comments:

Post a Comment