Sunday 3 May 2015

ಬಡವರಿಗೆ ಅಕ್ಕಿ,ಗೋಧಿ ಉಚಿತ ವಿತರಣೆ ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ
ಮಂಡ್ಯಮೇ. 3. ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರಧಾನ್ಯ ವಿತರಣಾ ಕಾರ್ಯಕ್ರಮಕ್ಕೆ ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್. ಅಂಬರೀಷ್ ಅವರು ಚಾಲನೆ ನೀಡಿದರು.
ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿ ಶನಿವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಮ್ಮ ಸರ್ಕಾರ ಈ ವರೆಗೂ 1 ರೂಪಾಯಿಗೆ ಬಡವರಿಗೆ ಅಕ್ಕಿ ಕೊಡುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರು ಕನಿಷ್ಠ ಎರಡು ಹೊತ್ತಾದರೂ ನೆಮ್ಮದಿಯಿಂದ ಊಟ ಮಾಡಲಿ ಎಂಬ ಉದ್ದೇಶದಿಂದ ಮೇ ತಿಂಗಳಿಂದ ಸಂಪೂರ್ಣ ಉಚಿತವಾಗಿ ಅಕ್ಕಿ, ಗೋಧಿಯನ್ನು ಪಡಿತರ ವ್ಯವಸ್ಥೆಯಲ್ಲಿ ನೀಡುವುದರಿಂದ ಸಂತೋಷ ಪಡಬೇಕು ಎಂದು ಹೇಳಿದರು.
ಇದಲ್ಲದೆ, ರಿಯಾಯಿತಿಯಲ್ಲಿ 25 ರೂ. ದರದಲ್ಲಿ 1 ಲೀಟರ್ ತಾಳೆ ಎಣ್ಣೆ, ಹಾಗೂ 2 ರೂ.ಗೆ ಉಪ್ಪನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಅಂತ್ಯೋದಯ ಚೀಟಿದಾರರಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, ಬಿ.ಪಿ.ಎಲ್. ಚೀಟಿದಾರರಿಗೆ ಕನಿಷ್ಠ 1 ಯೂನಿಟ್‍ಗೆ 4 ಕೆ.ಜಿ. ಅಕ್ಕಿ, 1 ಕೆ.ಜಿ. ಗೋಧಿಯಂತೆ ಗರಿಷ್ಠ 30 ಕೆ.ಜಿ. ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಹೇಳಿದರು.
ಎ.ಪಿ.ಎಲ್. ಕುಟುಂಬಗಳಿಗೂ ಸಹ ಮುಂದಿನ ತಿಂಗಳಿಂದ ರಿಯಾಯಿತಿ ದರದಲ್ಲಿ ಆಹಾರಧಾನ್ಯ ವಿತರಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ
ಮಂಡ್ಯ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 4.65 ಲಕ್ಷ ಬಿ.ಪಿ.ಎಲ್. ಕುಟುಂಬಗಳು ಹಾಗೂ 69 ಸಾವಿರ ಎ.ಪಿ.ಎಲ್ ಕುಟುಂಬಗಳು ಸೌಲಭ್ಯ ಪಡೆಯುತ್ತವೆ ಎಂದು ಹೇಳಿದರು.
ಕೆಶಿಪ್ ಯೋಜನೆಯಡಿ ಹಿರಿಯೂರು, ಕೌಡ್ಲೆ, ಕೆರಗೋಡು, ಮಂಡ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆಗೆ ಕಳೆದ 7-8 ವರ್ಷಗಳಿಂದ ಗ್ರಹಣ ಹಿಡಿದಿತ್ತು. ಎಲ್ಲಾ ವಿಘ್ನಗಳನ್ನು ಈಗ ನಿವಾರಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಬಾರ್ಡ್‍ನ 19ನೇ ಯೋಜನೆಯಡಿ 50 ಲಕ್ಷ ರೂ.ಗಳ ಅಂದಾಜಿನಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಹೊಡಘಟ್ಟ, ಶಿವಾರ ಮಾರಗೌಡನಹಳ್ಳಿ ರಸ್ತೆಯ ಶಂಕುಸ್ಥಾಪನೆ ನೆರವೇರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಸ್. ವಿಜಯಾನಂದ, ಪಡಿತರ ವಿತರಕರ ಸಂಘದ ಮುಖಂಡರಾದ ಕೃಷ್ಣಪ್ಪ, ಮುಖಂಡರಾದ, ಅಮರಾವತಿ ಚಂದ್ರಶೇಖರ್, ಚಿದಂಬರ್ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment