Thursday 26 February 2015

ಮಂಡ್ಯ, ಫೆ.26 ನಗರ ವಾಸಿಗಳಿಗೆ ಉತ್ತಮ ಗುಣಮಟ್ಟದ ತರಕಾರಿಗಳನ್ನು ತಮ್ಮ ಮನೆಯ ಅಂಗಳ ಅಥವಾ ತಾರಸಿಗಳಲ್ಲಿ ಬೆಳೆಸಿಕೊಳ್ಳುವುದರ ಜೊತೆಗೆ ಬಳಕೆ ಮಾಡಿಕೊಂಡು ಆರೋಗ್ಯ ಪೂರ್ಣ ಜೀವನ ಸಾಗಿಸಲು ನೆರವಾಗುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯ, ಕೈತೋಟ/ತಾರಸಿ ತೋಟಗಳ ನಿರ್ಮಾಣ ನಿರ್ವಹಣೆ ಬಗ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ಒಂದು ದಿನದ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
   ಆಸಕ್ತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾವ), ಮಂಡ್ಯರವರ ಕಚೇರಿಯಲ್ಲಿ ಅರ್ಜಿಯನ್ನು ಪಡೆದು  ಮಾರ್ಚ್ 5 ರ ಸಂಜೆ 4-00 ಗಂಟೆಯೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕು. ಈ ಯೋಜನೆಯಡಿ 500 ಜನ ಫಲಾನುಭವಿಗಳಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ನೊಂದಣಿ ಮಾಡಿಸಿಕೊಂಡ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಈ ಹಿಂದೆ ತರಬೇತಿ ಪಡೆದವರಿಗೆ ಮತ್ತೆ ತರಬೇತಿ ಪಡೆಯಲು ಅವಕಾಶವಿಲ್ಲ.
       ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾಜ್ಯವಲಯ), ಮಂಡ್ಯ (ದೂರವಾಣಿ ಸಂಖ್ಯೆ 08232-220325(ಹಾರ್ಟಿ ಕ್ಲಿನಿಕ್), 08232-220115 - ಕಚೇರಿ) ರವರವನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಷಿಕ ವಿಶೇಷ ಶಿಬಿರ
ರಾಷ್ಟ್ರೀಯ ಸೇವಾ ಯೋಜನೆ ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ (ರಾಜ್ಯ ಎನ್.ಎಸ್.ಎಸ್. ಪ್ರಶಸ್ತಿ ಮತ್ತು ರಾಷ್ಟ್ರೀಯ ಇಂದಿರಾಗಾಂಧಿ ಎನ್.ಎಸ್.ಎಸ್. ಪ್ರಶಸ್ತಿ ಪುರಸ್ಕøತ ಸಂಸ್ಥೆ) ಹಾಗೂ ಪುರ ಗ್ರಾಮಸ್ಥರು ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 5 ರವರೆಗೆ ಮಂಡ್ಯ ತಾಲ್ಲೂಕು ಪುರ ಗ್ರಾಮದಲ್ಲಿ ವಾರ್ಷಿಕ ವಿಶೇಷ ಶಿಬಿರ ಘಟಕ 1 ಮತ್ತು ಘಟಕ 2 ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಫೆ.27 ರಂದು ಮೈಸೂರು ವಿಭಾಗೀಯ ಮಟ್ಟದ ಸಂವೇದನಾಶೀಲ ಕಾರ್ಯಾಗಾರ
   ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ(ರಿ), ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ-2012 ಹಾಗೂ ಮಕ್ಕಳ ಸಾಗಾಣಿಕೆಯ ವ್ಯಾಪ್ತಿ, ಸ್ವರೂಪ, ಕಾರಣಗಳು ಮತ್ತು ವಿಧಗಳು ಹಾಗೂ ಸಾಗಾಣಿಕೆ ತಡೆಗಟ್ಟುವ ಬಗ್ಗೆ ಸಂವೇದನಾಶೀಲ ಕಾರ್ಯಗಾರವನ್ನು ಫೆಬ್ರವರಿ 27 ರಂದು ಬೆಳಿಗ್ಗೆ 10 ಗಂಟೆಗೆ  ಮಂಡ್ಯ ಪಿ.ಇ.ಎಸ್. ಇಂಜಿನಿಯರಿಂಗ್  ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳಾದ ಡಾ.ಅಜಯ್ ನಾಗಭೂಷಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹಿರಿಯ ಪ್ರಧಾನ ಸಿವಿಲ್ ನ್ಯಾಯಧೀಶರಾದ ಸದಾನಂದ ಎಂ.ದೊಡ್ಡಮನಿ ಅವರು ಅಧ್ಯಕ್ಷತೆ ವಹಿಸುವರು.

ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬಗಳಿಗೆ ಸರ್ಕಾರದ ಸಂಪನ್ಮೂಲಗಳ ಕಡಿತ
ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬಗಳಿಗೆ ಸರ್ಕಾರ ನೀಡುವ ಇತರ ಸಂಪನ್ಮೂಲಗಳನ್ನು ಕಡಿತಗೊಳಿಸಲಾಗುವುದು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿಗೌಡ ಹೇಳಿದ್ದಾರೆ.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಮೈಸೂರು, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಬ್ರಹ್ಮದೇವರಹಳ್ಳಿ ಹಾಗೂ ಶಿಶು ಅಭಿವೃಧ್ಧಿ ಇಲಾಖೆ, ಶಿಕ್ಷಣ ಇಲಾಖೆ , ಆರೋಗ್ಯ ಇಲಾಖೆ, ನಾಗಮಂಗಲ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕೊಣನೂರಿನಲ್ಲಿ ಜರುಗಿದ ಸ್ವಚ್ಚ ಭಾರತ್ ಅಭಿಯಾನ, ಹೆಣ್ಣು ಶಿಶು ರಕ್ಷಿಸಿ-ಶಿಕ್ಷಣ ಕೊಡಿಸಿ ಹಾಗೂ ಪ್ರಧಾನ ಮಂತ್ರಿ ಜನ-ಧನ ಯೋಜನೆ ಕುರಿತಾದ ವಿಶೇಷ ವಿಸ್ತøತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
   ಗ್ರಾಮಿಣ ಭಾಗದಲ್ಲಿ ಜನರ ಜೀವನ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳಲ್ಲಿ ಸ್ವಚ್ಛ ಭಾರತ, ಜನ-ಧನ ಯೋಜನೆಗಳು ಅತ್ಯಂತ ಮಹತ್ವದ್ದಾಗಿದ್ದು ಜನರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತಿ ಅಧ್ಯಕ್ಷ ಮೂಡ್ಲಿಗೌಡ ಸರ್ಕಾರ ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಗಳಿಗೆ ನೀಡುವ ಸೌಲಭ್ಯಗಳನ್ನು ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಅಂತಹ ಕುಟುಂಬಗಳು ಸಾಮಾಜಿಕವಾಗಿ ಮುಂದೆ ಬರುವಂತೆ ಪ್ರೇರೇಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಮಂಜುಳಾ, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ, ಮೈಸೂರು ಘಟಕದ ಸಹಾಯಕ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ಆದಿಚುಂಚನಗಿರಿ ಮಠದ ಸಲಹೆಗಾರ ಅಮರನಾರಾಯಣ, ಗ್ರಾಮ ಪಂಚಾಯತಿ ಸದಸ್ಯ ಮಹಾದೇವ, ಗ್ರಾಮದ ಮುಖಂಡ ಮಹಾಬಲೇಶ್ವರ, ಶಿವಣ್ಣೇಗೌಡ, ಶ್ರೀನಿವಾಸಯ್ಯ, ಪಿ.ಡಿ.ಓ ಶ್ರೀಕಂಠ, ಕಾರ್ಯದರ್ಶಿ ರಂಗಸ್ವಾಮಿ ಹಾಗೂ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು, ಯುವ ಮುಖಂಡ ಧನಂಜಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸ್ವಚ್ಚ ಭಾರತ್ ಅಭಿಯಾನ, ಹೆಣ್ಣು ಶಿಶು ರಕ್ಷಿಸಿ-ಶಿಕ್ಷಣ ಕೊಡಿಸಿ ಹಾಗೂ ಪ್ರಧಾನ ಮಂತ್ರಿ ಜನ-ಧನ ಯೋಜನೆ ಕುರಿತು ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ರ್ಯಾಲಿ ಏರ್ಪಡಿಸಿದ್ದು, ರಸ ಪ್ರಶ್ನೆ ಮೂಲಕ ಬಹುಮಾನಗಳನ್ನು ವಿತರಿಸಲಾಯಿತು.

No comments:

Post a Comment