Thursday 26 February 2015

ಭಾರತ ಸರ್ಕಾರದ ವಾರ್ತಾ ಶಾಖೆ
ಬೆಂಗಳೂರು
********
ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ

ಫೆಬ್ರವರಿ 26. 2015
14ನೆಯ ಹಣಕಾಸು ಆಯೋಗದ ಶಿಫಾರಸುಗಳನ್ನು ತುಂಬುಹೃದಯದಿಂದ ಸ್ವೀಕರಿಸಬೇಕಾಗಿ ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ :
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ನಾನು ನಮ್ಮ ಸಂಯುಕ್ತ ರಾಜ್ಯಾಡಳಿತವನ್ನು ಸದೃಢಗೊಳಿಸಿ, ಸಹಕಾರಿ ಒಕ್ಕೂಟವನ್ನು  ಉತ್ತೇಜಿಸುವೆಡೆ ಕಾರ್ಯೋನ್ಮುಖನಾಗಿದ್ದೇನೆ.  ನಮ್ಮ ದೇಶದ ಜನತೆಗೆ ಅವರ ಸರ್ಕಾರದಿಂದ ಅತೀವ ನಿರೀಕ್ಷೆಗಳಿವೆ. ಆದರೆ, ಅವರು ಕಾಯಲು ಸಿದ್ಧರಿಲ್ಲ. ಆದ್ದರಿಂದ ಪ್ರಾರಂಭದಿಂದಲೇ ನಾವು ಬೆಳವಣಿಗೆಯ ಸಮಗ್ರ ಮತ್ತು ಕ್ಷಿಪ್ರ ಪ್ರಕ್ರಿಯೆಗೆ ಬದ್ಧರಾಗಿದ್ದೇವೆ. ದೇಶದ ವೈವಿಧ್ಯತೆಯನ್ನು ಗಮನಿಸಿ, ನೈಜ ಮತ್ತು ಕಾರ್ಯೋನ್ಮುಖ ಸಂಯುಕ್ತ ಆಡಳಿತವೊಂದೇ ಈ ಗುರಿಯನ್ನು ಕ್ಷಿಪ್ರ ಮತ್ತು ಸಮಗ್ರವಾಗಿ ಸಾಧಿಸುವ ಏಕೈಕ ವಾಹನ ಎಂಬುವುದನ್ನು ನಾವು ತಿಳಿದುಕೊಂಡಿದ್ದೇವೆ.
ಸದೃಢ ರಾಜ್ಯಗಳು ಸದೃಢ ಭಾರತದ ಮೈಲಿಗಲ್ಲು ಎಂಬುವುದನ್ನು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ. ಮುಖ್ಯಮಂತ್ರಿಯಾಗಿದ್ದಾಗಲೂ ನಾನು ‘ರಾಜ್ಯಗಳ ಪ್ರಗತಿಯ ಮೇಲೆ ದೇಶದ ಪ್ರಗತಿ ಆಧರಿತವಾಗಿದೆ’ ಎಂದು ಹೇಳುತ್ತಲೇ ಇದ್ದೆ.  ಹಾಗಾಗಿ, ಈ ಸರ್ಕಾರ ಎಲ್ಲ ರೀತಿಯಲ್ಲೂ ರಾಜ್ಯಗಳ ಸಬಲೀಕರಣದ ಆಲೋಚನೆಗೆ ಬದ್ಧವಾಗಿದೆ. ಆರ್ಥಿಕ ವಿವೇಚನೆ ಮತ್ತು ಶಿಸ್ತುಗಳನ್ನು ಗಮನದಲ್ಲಿರಿಸಿ ಹೆಚ್ಚಿನ ಹಣಕಾಸು ಬಲ ಮತ್ತು ಸ್ವಾತಂತ್ರ್ಯಗಳನ್ನು ಹೊಂದುವ ಮೂಲಕ ರಾಜ್ಯಗಳಿಗೆ ತಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳ ರೂಪುರೇಷೆ ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ನಾವು ನಂಬಿದ್ದೇವೆ. ಇವುಗಳಿಲ್ಲದೆ ಸ್ಥಳೀಯ ಅಭಿವೃದ್ಧಿ ಆವಶ್ಯಕತೆಗಳನ್ನು ಪೂರೈಸಲು ಮತ್ತು ಹಿಂದುಳಿದ ವರ್ಗಗಳ ಹಾಗೂ ಹಿಂದುಳಿದ ಪ್ರದೇಶಗಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಿಲ್ಲ ಎಂಬುವುದನ್ನು ನಾವು ಇಲ್ಲಿ ಸ್ಪಷ್ಟ ಪಡಿಸುತ್ತೇವೆ.
ಈ ಎಲ್ಲ ಅಂಶÀಗಳನ್ನು ಗಮನದಲ್ಲಿರಿಸಿ ನಾವು ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗವನ್ನು ಪರಿಚಯಿಸಿದ್ದೇವೆ. ಅಭಿವೃದ್ಧಿಯ ರಾಷ್ಟ್ರೀಯ ದೃಷ್ಟಿಕೋನವನ್ನು ಹಂಚಿಕೊಳ್ಳಲು ಇದೊಂದು ಸಾಮಾನ್ಯ ವೇದಿಕೆಯಾಗಲಿದೆ ಎಂಬ ಸ್ಪಷ್ಟ ಉದ್ದೇಶದಿಂದ ಈ ಆಯೋಗವನ್ನು ಪ್ರಾರಂಭಿಸಲಾಗಿದೆ. 14ನೆಯ ಹಣಕಾಸು ಆಯೋಗ ರಾಜ್ಯಗಳಿಗೆ ನೀಡುವ ಸಂಪನ್ಮೂಲಗಳ ವಿಕೇಂದ್ರೀಕರಣದಲ್ಲಿ ಶೇ 10 ರಷ್ಟು ದಾಖಲೆ ಪ್ರಮಾಣದ ಏರಿಕೆಗೆ ಶಿಫಾರಸು ಮಾಡಿದೆ. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ ತೀವ್ರ ಹೊರೆ ಬೀಳಲಿದೆ. . ಆದರೂ, ನಿಮ್ಮ ಅಗತ್ಯತೆ ಮತ್ತು ಪ್ರಾಧಾನ್ಯತೆಗೆ ತಕ್ಕಂತೆ ಯೋಜನೆಗಳನ್ನು ವಿನ್ಯಾಸಿಸುವ ಮತ್ತು ಅನುಷ್ಠಾನಕ್ಕೆ ತರುವಲ್ಲಿ ನಿಮ್ಮ ಕೈಜೋಡಿಸುವ ಉದ್ದೇಶದಿಂದ ನಾವು 14ನೆಯ ಹಣಕಾಸು ಆಯೋಗದ ಶಿಫಾರಸುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೇವೆ.
14ನೆಯ ಹಣಕಾಸು ಆಯೋಗ ಹಣಕಾಸು ಆದಾಯ ವೆಚ್ಚಗಳ ವಿನ್ಯಾಸದಲ್ಲಿ ಮೂಲಭೂತ ವರ್ಗಾವಣೆÉಯನ್ನು ಮಾಡಿದೆ. ಇನ್ನು ಮುಂದೆ ರಾಜ್ಯ ಯೋಜನಾ ಆದಾಯ ವೆಚ್ಚಗಳಿಗೆ ನೀಡಲ್ಪಡುವ ಕೇಂದ್ರ ಸಹಾಯ ರಾಜ್ಯದ ಆರ್ಥಿಕ ಹೊರೆಯ ಭಾಗವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರದ ಯೋಜನೆ ಮತ್ತು ಅನುದಾನ ಆಧರಿತ ಬೆಂಬಲ ಇನ್ನು ಮುಂದೆ ವಿಕೇಂದ್ರೀಕರಣ ಆಧರಿತವಾಗಲಿದೆ.
14ನೆಯ ಹಣಕಾಸು ಆಯೋಗದ ಪ್ರಕಾರ ರಾಜ್ಯ ವಿಕೇಂದ್ರಿತ  ಸಂಪನ್ಮೂಲಗಳಿಗಷ್ಟೇ ರಾಜ್ಯ ಯೋಜನಾ ಆದಾಯ ವೆಚ್ಚ ಮೀಸಲಿರಬೇಕು.  ಇದಕ್ಕೆ ಹೊರತಾಗಿ ಕೆಲವು ರಾಷ್ಟ್ರೀಯ ಪ್ರಧಾನ್ಯತೆಯುಳ್ಳ ಕಾರ್ಯಕ್ರಮಗಳಾದ ನರೇಗಾ, ಬಡತನ ನಿರ್ಮೂಲನೆ, ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಕೃಷಿ ಮತ್ತು ಇನ್ನಿತರ ಕ್ಷೇತ್ರಗಳಿಗೆ ಈಗಿರುವ ಹಣಕಾಸು ಬೆಂಬಲವನ್ನೇ ಮುಂದುವರೆಸಲು ನಾವು ನಿರ್ಧರಿಸಿದ್ದೇವೆ.
ಈ ಹಣಕಾಸು ಆಯೋಗದ ಶಿಫಾರಸುಗಳನ್ನು ಸ್ವೀಕರಿಸುವ ಮೂಲಕ ನಾವು ಕಠಿಣ ಕೇಂದ್ರೀಕೃತ ಯೋಜನೆಯಿಂದ ದೂರ ಸಾಗಿ  ‘ ಒನ್ ಸೈಜ್ ಫಿಟ್ ಫಾರ್ ಆಲ್’ ( ಒಂದೇ ಗಾತ್ರ ಮತ್ತು ಎಲ್ಲರಿಗೂ ಸೂಕ್ತವಾದ) ವಿಧಾನದೆಡೆ ಸಾಗುತ್ತಿದ್ದೇವೆ.  ಕೇಂದ್ರ ಬೆಂಬಲಿತ  ಯೋಜನೆಗಳಲ್ಲಿ  ಮತ್ತು ಕಾರ್ಯಕ್ರಮಗಳಲ್ಲಿ ಬದಲಾಣೆ ತರಲು ರಾಜ್ಯಗಳು ಸಂಪೂರ್ಣ ಸ್ವಾತಂತ್ರ್ಯ ಹೊಂದಿವೆ. ಆಲೋಚನೆ , ಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಕೇಂದ್ರ ಸರ್ಕಾರ , ಅದರಲ್ಲೂ ನೀತಿ ಆಯೋಗ ಒಂದು ನಿರ್ಧಿಷ್ಟ ವಿಧಾನವನ್ನು ಅಭಿವೃದ್ಧಿ ಪಡಿಸಿ ಅದನ್ನು ಅಳವಡಿಸುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲಿದೆ.
ಸಂಪನ್ಮೂಲಗಳು ಸರಿಯಾದ ಜಾಗವನ್ನು ತಲುಪುತ್ತಿವೆ. ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಠಿ, ವಸತಿ, ಕುಡಿಯುವ ನೀರು, ರಸ್ತೆ ನಿರ್ಮಾಣ, ಶಾಲೆ, ಆಸ್ಪತ್ರೆಗಳ ನಿರ್ಮಾಣ ಇವುಗಳಿಗಾಗಿ ಸಂಪನ್ಮೂಲ ವಿನಿಯೋಗವಾಗುತ್ತಿದೆ.
ನಾವು ಇತ್ತೀಚಿಗೆ ಖನಿಜಗಳ ಮೇಲಿನ ರಾಯಧನಗಳನ್ನು ಪರಿಷ್ಕರಿಸಿದ್ದೇವೆ.  ಇದರಿಂದಾಗಿ ರಾಜ್ಯಗಳಿಗೆ ಪ್ರಯೋಜನವಾಗಲಿದೆ. ಕಲ್ಲಿದ್ದಲು ಮತ್ತು ಇತರ ಖನಿಜಗಳ ಪಾರದರ್ಶಕ ಹರಾಜಿನಿಂದ  ಅವನ್ನು ಹೊಂದಿರುವ ರಾಜ್ಯಗಳ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಹರಿದು ಬರಲಿದೆ.
 ದೇಶದ ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಗೆ ಇದೊಂದು ಸುವರ್ಣ ಅವಕಾಶ.  ಭಾರತದಲ್ಲಿ ಹಣ ಹೂಡುವ ಬಗ್ಗೆ ಹೊರದೇಶಗಳಿಗೆ ಅತೀವ ಆಸಕ್ತಿ ಇದೆ.  ನಮ್ಮ ದೇಶದ ಬಗ್ಗೆ ಹೊರದೇಶಗಳಿಗೆ ಅಪಾರ ಆಶಾವಾದವಿರುವುದನ್ನು ನನ್ನ ಇತ್ತೀಚಿನ ಪ್ರಪಂಚ ಪರ್ಯಟನೆ ತೋರಿಸಿಕೊಟ್ಟಿದೆ.  ಭಾರತದ ಬೆಳವಣಿಗೆಯ ಯಶೊಗಾಥೆಯಲ್ಲಿ ಎಲ್ಲರೂ ಭಾಗವಾಗಲು ಇಚ್ಛಿಸುತ್ತಿದ್ದಾರೆ.  ಇದು ಕೇವಲ ಕೇಂದ್ರ ಸರ್ಕಾರಕ್ಕೆ ಸಿಕ್ಕ ಅವಕಾಶವಲ್ಲ ಬದಲಾಗಿ ಇಡೀ ದೇಶಕ್ಕೇ ಸಿಕ್ಕ ಅವಕಾಶ.
ದೇಶದ ಪ್ರಗತಿ ಪ್ರಕ್ರಿಯೆಯಲ್ಲಿ ಕ್ಷಿಪ್ರ ಮುನ್ನಡೆಯನ್ನು ಸಾಧಿಸುವ ಗುರಿಯನ್ನು ಹೊಂದೋಣ.  ನಿಮ್ಮ ರಾಜ್ಯಗಳಲ್ಲಿರುವ ಪ್ರಮುಖ ಸವಾಲುಗಳನ್ನು ವ್ಯಾಖ್ಯಾನಿಸುವಲ್ಲಿ ನಿಮ್ಮ ಬೆಂಬಲ ಮತ್ತು ಒಳಗೊಳ್ಳುವಿಕೆಯನ್ನು ಯಾಚಿಸಲು ಮತ್ತು ಆ ಸವಾಲುಗಳ ಎದುರಿಸಲು ಸಮಯ, ಸಂಪನ್ಮೂಲ ಮತ್ತು ಶಕ್ತಿಯನ್ನು ಮೀಸಲಿಡಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ.  ಎಲ್ಲ ರಾಜ್ಯಗಳು ತಮ್ಮ ಪ್ರಮುಖ ಆದ್ಯತಾ ಯೋಜನೆಗಳನ್ನು ರೂಪಿಸುವುದರ ಜತೆಗೆ ಅವಕ್ಕಾಗಿ ಸಂಪನ್ಮೂಲಗಳನ್ನು ಮೀಸಲಿಡುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಯೋಜನೆಗಳ ಮೌಲ್ಯಮಾಪನಕ್ಕಾಗಿ ನಾವೊಂದು ಕಠಿಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಈ ಪ್ರಯತ್ನದಲ್ಲಿ ನಾನು ನಿಮ್ಮೊಂದಿಗಿದ್ದೇನೆ. ಗುಣಮಟ್ಟದ ಕೆಲಸ ಮತ್ತು ಅದರ ಕ್ಷಿಪ್ರ ಅನುಷ್ಠಾನದಲ್ಲಿ ನಾವು ಮಾನದಂಡ ಸ್ಥಾಪಿಸಬೇಕು. ಬನ್ನಿ. . . …ಈ ನಿಟ್ಟಿನಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸೋಣ. ಇದಕ್ಕೆ ಸಂಬಂಧಿಸಿದಂತೆ ಸಮಾಲೋಚನೆಗೆ ನಾನು ಯಾವುದೇ ಹೊತ್ತಿನಲ್ಲಿ ಲಭ್ಯನಾಗಿದ್ದೇನೆ.
************

No comments:

Post a Comment