Sunday 19 March 2017

ರಾಜ್ಯದ ಬೇರೆ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳಿಗೆ ವಿಶೇಷ

ಮಂಡ್ಯ ,19- ರಾಜ್ಯದ ಬೇರೆ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಜಿಲ್ಲೆ ಪೌರಾಣಿಕ ನಾಟಕಗಳ ತೊಟ್ಟಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ವೈ.ಎನ್. ಶಂಕರೇಗೌಡ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಶ್ರೀ ರೇವಣಸಿದ್ದೇಶ್ವರ ಕಲಾ ಸಂಘದ ವತಿಯಿಂದ ನಡೆದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಪೌರಾಣಿಕ ನಾಟಕ ಕಲೆಯನ್ನು ಜೀವಂತವಾಗಿಟ್ಟಿರುವ ಜಿಲ್ಲೆ. ನಾಟಕಗಳನ್ನು ಉಳಿಸಿ ಬೆಳೆಸಿ ಕಾಪಾಡಿ ಎಂದು ಕರೆ ನೀಡಿದರು.
ಪೌರಾಣಿಕ ನಾಟಕಗಳ ಸಂಬಂಧ ರಾಜ್ಯದ ಇತರ ಜಿಲ್ಲೆಗಳೊಂದಿಗೆ ಉತ್ತಮ ಬಾಂಧವ್ಯ ಮೂಡಿಬರಲಿ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ ಮಾತನಾಡಿ, ಈ ಬರಗಾಲದ ನಡುವೆಯೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಡಿಮೆ ಮಾಡಬೇಕಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಿ ನೀರು ಸಿಗುತ್ತಿಲ್ಲವೋ  ಆ ಭಾಗಗಳಿಗೆ ಕಲಾ ಸಂಘಗಳ ಮೂಲಕ  ಟ್ಯಾಂಕರ್‍ಗಳನ್ನು ಬಾಡಿಗೆಗೆ ಪಡೆದು ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯಕ್ರಮ ರೂಪಿಸುವಂತೆ ಕರೆ ನೀಡಿದರು.
ಮಳೆ ಬೆಳೆ ಇಲ್ಲ, ಬರಗಾಲದ ತೀವ್ರತೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಸಾಂಸ್ಕøತಿಕ ಕಾರ್ಯಕ್ರಮಗಳತ್ತ ರೈತರಿಗೆ ಒಲವು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿ  ರೈತನ ಬದುಕು ಹಸನಾಗಲಿ ಎಂದು ಆಶಿಸಿದರು.
ಭೆರವೇಶ್ವರ ಜಲ್ಲಿ ಕ್ರಷರ್ ಮಾಲೀಕ ಸಿ.ಕೆ. ದೇವರಾಜು, ಮಾಂಡವ್ಯ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಡಾ. ಉಮೇಶ್, ಮಾಸ್ಟರ್ ನಾಗಣ್ಣ, ಕಲಾವಿದರಾದ ಕಾಳೇನಹಳ್ಳಿ ಕೆಂಚೇಗೌಡ, ಸಾತನೂರು ವೆಂಕಟೇಶ್, ಕೆ.ಬಿ. ಬೋರೇಗೌಡ, ಸುರೇಶ್, ಕೆಪಿಸಿಸಿ ಮುಖಂಡ ರಮೇಶ್ ತಿಬ್ಬನಹಳ್ಳಿ ಇತರರು ಇದ್ದರು.

No comments:

Post a Comment