Friday 15 January 2016

 ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆಯ ಸಕಲ ಸಿದ್ಧತೆಗೆ ಸೂಚನೆ
ಮೈಸೂರು,ಜ.14-ನಂಜನಗೂಡು ತಾಲ್ಲೂಕಿನ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರಸ್ವಾಮಿ  ದೊಡ್ಡಜಾತ್ರೆ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಅಧಿಕಾರಿಗಳು ಶೀಘ್ರ ಸಕಲ ಸಿದ್ಧತೆ ಕೈಗೊಳ್ಳುಬೇಕು ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.
     ಇಂದು ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ದಾಸೋಹ ಭವನದ ವಿ.ಐ.ಪಿ ಹಾಲ್ ನಡೆದ ಶ್ರೀ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾರ್ಚ್ 14 ರಿಂದ 25ರವರೆಗೆ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವತಿಯಿಂದ ಹಲವು ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಹಕಾರ ಪಡೆದು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
      ಮಾರ್ಚ್ 21 ರಂದು ರಥೋತ್ಸವ ಜರುಗಲಿದ್ದು, ರಥಗಳು ಬರುವ ನಾಲ್ಕು ಬೀದಿಗಳಲ್ಲಿ ರಥಗಳ ಚಲನೆಗೆ ಯಾವುದೇ ಅಡೆತಡೆ ಆಗದಂತೆ ರಸ್ತೆಗಳ ಸಮತಟ್ಟು ಮಾಡಬೇಕು. ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಸ್ಥಳಗಳಳ್ಲಿ ತಾತ್ಕಾಲಿಕ ನಲ್ಲಿಗಳನ್ನು ಹಾಕಬೇಕು. ದೇವಾಲಯದ ಸುತ್ತಲು ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಬೇಕು. ಕಸದ ತೊಟ್ಟಿಗÀಳಿಂದ ಕಸ ಸಾಗಿಸಲು ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮವನ್ನು ನಂಜನಗೂಡು ನಗರ ಸಭೆ ಕೈಗೊಳ್ಳಬೇಕು ಎಂದರು.
      ಪೊಲೀಸ್ ಇಲಾಖೆ ಜಾತ್ರೆ ನಡೆಯುವ ದಿನದಂದು, ಅಗತ್ಯ ಬಂದೋಬಸ್ತು ಮಾಡಬೇಕು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳ ವಾಹನಗಳು ಬರುವುದರಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ಮಾತ್ರ ವಾಹನ ನಿಲುಗಡೆಗೆ ವ್ಯವಸ್ಥೆ, ಭಕ್ತಾದಿಗಳ ನೂಕು-ನುಗ್ಗಲು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಭಕ್ತಾದಿಗಳು ಸಂಚರಿಸುವ ಮುಖ್ಯ ಸ್ಥಳಗಳಲ್ಲಿ ಕಳ್ಳತನ ಆಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
     ಜಾತ್ರಾ ದಿನಗಳಲ್ಲಿ ದೇವಸ್ತಾನಕ್ಕೆ ಬರುವ ಭಕ್ತಾದಿಗಳಿಗೆ ತಾತ್ಕಾಲಿಕ ಕುಡಿಯುವ ನೀರು, ಶೌಚಾಲಯಗಳ  ವ್ಯವಸ್ಥೆಗೆ ನಂಜನಗೂಡು ತಾಲ್ಲೂಕು ಪಂಚಾಯತ್ ಅಗತ್ಯ ಕ್ರಮಕೈಗೊಳ್ಳಬೇಕು. ರಥೋತ್ಸವದ ಅಂಗವಾಗಿ ನಡೆಯುವ ಉತ್ಸವಾದಿಗಳು ಮತ್ತು ತೆಪ್ಪೋತ್ಸವದ ಕಾಲದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗದಂತೆ ಇಂಧನ ಇಲಾಖೆ ಎಚ್ಚರವಹಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ನಿರ್ದೇಶಿಸಿದರು.
     ಕಬಿನ ನೀರಾವರಿ ಇಲಾಖೆಯು ಜಾತ್ರೆ ಮುಗಿಯುವವರೆಗೂ ಭಕ್ತಾದಿಗಳು ಹಾಗೂ ಸಾರ್ವಜನಿಕರು ಸೌಕರ್ಯಕ್ಕಾಗಿ ನದಿಯಲ್ಲಿ ಮತ್ತು ಹುಲ್ಲಹಳ್ಳಿ ನಾಲೆಯಲ್ಲಿ ನೀರನ್ನು ಹರಿಸಬೇಕು. ಕಪಿಲಾ ನದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ತೆಗೆಸಿ ಭಕ್ತಾದಿಗಳಿಗೆ ಸ್ನಾನಕ್ಕಾಗಿ ವ್ಯವಸ್ಥೆ ಮಾಡಬೇಕು. ತೆಪ್ಪೋತ್ಸವದ ಅಂಗವಾಗಿ ಮಾರ್ಚ್ 23 ರಂದು ನದಿಯಲ್ಲಿ ದೋಣಿಯ ಚಾಲನೆಗೆ ಅಗತ್ಯ ನೀರನ್ನು ನದಿಗೆ ಹರಿಬಿಡಲು ಕ್ರಮವಹಿಸಬೇಕು ಎಂದರು.
    ರಥೋತ್ಸವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಆರೋಗ್ಯ ಇಲಾಖೆವಹಿಸಬೇಕು. ದೇವಾಲಯದ ಹತ್ತಿರ ತಾತ್ಕಾಲಿಕ ಪ್ರಥಮ ಚಿಕಿತ್ಸೆ ಹಾಗೂ ಆರೋಗ್ಯ ಕೇಂದ್ರ ತೆರೆದು, ಆಂಬ್ಯುಲೆನ್ಸ್  ವಾಹನದೊಂದಿಗೆ ಸಾಕಷ್ಟು ಸಿಬ್ಬಂದಿ ನಿಯೋಜಿಸಬೇಕು. ಅಲ್ಲದೆ ಭಕ್ತಾದಿಗಳಿಗೆ ಅಗತ್ಯ ಔಷದೋಪಚಾರ ಮಾಡಲು ಸಿದ್ಧರಿರಬೇಕು. ರಥೋತ್ಸವದ ದಿನದಂದು ರಥಗಳು ಸಂಚರಿಸುವ ಬೀದಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಇಲಾಖೆ ಎರಡು ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
     ರಥೋತ್ಸವ ಮತ್ತು ತೆಪ್ಪೋತ್ಸವದ ದಿನಗಳಲ್ಲಿ ನಂಜನಗೂಡಿಗೆ ಹಲವು ಭಾಗಗಳಿಂದ ಬರುವ ಭಕ್ತಾದಿಗಳಿಗೆ ಸೌಕರ್ಯಕ್ಕಾಗಿ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ. ರಥೋತ್ಸವ ದಿನದಂದು ಮುಗಿಯುವವರೆಗೆ ರಥಗಳ ಜೊತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎರಡು ಹೆವೀ ಕ್ರೇನ್ ವ್ಯವಸ್ಥೆ ಮಾಡಬೇಕು. ದೂರಸಂಪರ್ಕ ಇಲಾಖೆಯು ರಥಗಳು ಚಲಿಸುವ ಮಾರ್ಗದಲ್ಲಿ ಅಡ್ಡಲಾಗಿರುವ ತಂತಿಗಳನ್ನು ತೆಗೆದು ರಥಗಳು ಸ್ವಸ್ಥಾನಕ್ಕೆ ಬಂದ ನಂತರ ಮರು ಸಂಪರ್ಕ ಕಲ್ಪಿಸುಲು ಕ್ರಮವಹಿಸಬೇಕು ಎಂದು ಹೇಳಿದರು.
     ಸಭೆಯಲ್ಲಿ ಮೈಸೂರು ಉಪ ವಿಭಾಗಾಧಿಕಾರಿ ಆನಂದ್, ಉಪ ಪೊಲೀಸ್ ವರಿಷ್ಠ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ತಹಶೀಲ್ದಾರ್ ರಾಮಯ್ಯ, ತಾ.ಪಂ. ಕಾರ್ಯನಿರ್ವಹಕ ಅಧಿಕಾರಿ ಕೃಷ್ಣರಾಜು, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಕಾರ್ಯನಿರ್ವಹಕ ಅಧಿಕಾರಿ ಜಯಪ್ರಕಾಶ್, ತಾ.ಪಂ. ಅಧ್ಯಕ್ಷೆ ಸವಿತಾ, ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಮೋಹನ್ ಹಾಗೂ ಇತರರು ಭಾಗವಹಿಸಿದರು.
 ಗ್ರಂಥಾಲಯಗಳ ಬೆಳವಣಿಗೆಗೆ ಸಂಪೂರ್ಣ ಸಹಕಾರ : ಬಿ.ಎಲ್ ಭೈರಪ್ಪ
     ಮೈಸೂರು,ಜ.14.ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ 2016-17 ನೇ ಸಾಲಿನ ರೂ. 350 ಲಕ್ಷಗಳ ಆಯ-ವ್ಯಯವನ್ನು ಅನುಮೋದಿಸಿ, ನಗರ ಕೇಂದ್ರ ಗ್ರಂಥಾಲಯಕ್ಕೆ ಸೇರಿದ ಪೀಪಲ್ಸ್  ಪಾರ್ಕ್ ನಿವೇಶನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ರೂ. 1.25 ಕೋಟಿ ಗ್ರಂಥಾಲಯ ಕರವನ್ನು ಸರ್ಕಾರದ ತೀರ್ಮಾನದಂತೆ ನಗರ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸಲಾಗುವುದು ಹಾಗೂ ಗ್ರಂಥಾಲಯಗಳ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಮೈಸೂರು ಮಹಾನಗರ ಪಾಲಿಕೆ ಮಹಾಪೌರರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಬಿ.ಎಲ್.ಭೈರಪ್ಪ ಅವರು ತಿಳಿಸಿದರು.
     ಅವರು ಇತ್ತೀಚೆಗೆ ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ  ಮೈಸೂರು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮೈಸೂರು ನಗರ ಕೇಂದ್ರ ಗ್ರಂಥಾಲಯದ ಅಧೀನದಲ್ಲಿ ವಿವಿಧ ಬಡಾವಣೆಗಳಲ್ಲಿರುವ ಗ್ರಂಥಾಲಯಗಳು ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ/ಸೇವಾ ಕೇಂದ್ರ ಗ್ರಂಥಾಲಯಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಿ ಕಟ್ಟಡಗಳನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲು  ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
     ಜೆ.ಪಿ.ನಗರ ಶಾಖಾ ಗ್ರಂಥಾಲಯದಲ್ಲಿರುವ ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯಕ್ಕೆ 30x40 ಅಳತೆಯ  ಖಾಲಿ ನಿವೇಶನವನ್ನು ನೀಡುವುದರ ಜೊತೆಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸ ಬೇಕಾದÀ ಬಾಕಿ ಗ್ರಂಥಾಲಯ ಕರದ ಮೊತ್ತದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
     ಶಾಖಾ ಗ್ರಂಥಾಲಯಗಳು ಇಲ್ಲದೇ ಇರುವ ಸುಮಾರು 40 ವಾರ್ಡ್‍ಗಳಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡಗಳು, ಸಮುದಾಯ ಭವನಗಳಲ್ಲಿ ವಾಚನಾಲಯ ಪ್ರಾರಂಭಿಸಲು ಮಹಾನಗರ ಪಾಲಿಕೆಯ ಸದಸ್ಯರುಗಳೊಂದಿಗೆ ಚರ್ಚಿಸಿ, ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿ, ವಾಚನಾಲಯಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
     ಈ ಎಲ್ಲಾ ಗ್ರಂಥಾಲಯಗಳ/ವಾಚನಾಲಯಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಗ್ರಂಥಾಲಯ ವಿಜ್ಞಾನದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳನ್ನು ಅಪ್ರೆಂಟಿಸ್ ರೂಪದಲ್ಲಿ ತೆಗೆದುಕೊಂಡು ಅವರಿಗೆ ಸ್ಟೈಪೆಂಡರಿಯೊಂದಿಗೆ ತರಬೇತಿ ನೀಡಲೂ  ಅಧಿಕಾರಿಗಳಿಗೆ ತಿಳಿಸಿದರು.
     ಮೈಸೂರಿನ ವಿವಿಧ ಬಡಾವಣೆಗಳಲ್ಲೂ ಗ್ರಂಥಾಲಯ ಕಟ್ಟಡ ನಿರ್ಮಿಸಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶಗಳನ್ನು ಉಚಿತವಾಗಿ ನೀಡುವಂತೆ ಹಾಗೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ಪಾವತಿಬೇಕಾದ ಗ್ರಂಥಾಲಯ ಕರದ ಬಾಕಿ ಮೊತ್ತವನ್ನು ಪಾವತಿಸಲು ಸಭೆಯಲ್ಲಿ ಹಾಜರಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ಆರ್. ಮಂಜುನಾಥ್ ರವರಿಗೆ ತಿಳಿಸಿದರು.
      ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ಬಾಕಿ ಬರಬೇಕಾದ ಸುಮಾರು ರೂ. 9 ಕೋಟಿ ಮೊತ್ತವನ್ನು ನಗರದ ವಿವಿಧ ಬಡಾವಣೆಗಳಲ್ಲಿಯೂ ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಲು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ವೆಚ್ಚ ಮಾಡಲಾಗುವುದು ಎಂದರು.
    ಕುವೆಂಪುನಗರ ಕಾಂಪ್ಲೆಕ್ಸ್ ಬಳಿ ಇರುವ ಹೌಸಿಂಗ್ ಬೋರ್ಡ್, ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಖಾಲಿ ಇರುವ ಕಟ್ಟಡದಲ್ಲಿ ಗ್ರಂಥಾಲಯ ಪ್ರಾರಂಭಿಸಲು ಪರಿಶೀಲನೆ ನಡೆಸಲಾಗುವುದು ಎಂದರು.
     34 ರ ಮೇದರ್ ಬ್ಲಾಕ್ ಸಮುದಾಯ ಭವನದಲ್ಲಿ ಹಾಗೂ ವಾರ್ಡ್ ಸಂಖ್ಯೆ: 18 ರಲ್ಲಿ ಕುವೆಂಪು ಪ್ರತಿಮೆಯ ಕೆಳ ಭಾಗದಲ್ಲಿರುವ ವಾಚನಾಲಯ ಕಟ್ಟಡದಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸಲು ಸದರಿ ಕಟ್ಟಡಗಳನ್ನು ನಗರ ಕೇಂದ್ರ ಗ್ರಂಥಾಲಯಕ್ಕೆ ಹಸ್ತಾಂತರಿಸುವುದಾಗಿ  ತಿಳಿಸಿದರು.
     ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರಿಂದ ವಸೂಲು ಮಾಡುವ ಶೇ 6% ರ ಗ್ರಂಥಾಲಯ ಕರವನ್ನು ನೇರವಾಗಿ ಗ್ರಂಥಾಲಯ ಇಲಾಖೆಯ ಖಾತೆಗೆ ಜಮಾ ಮಾಡುವ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗುವುದು. ಜೆ.ಪಿ.ನಗರ, ಉದಯಗಿರಿ, ರಾಮಕೃಷ್ಣನಗರ, ವಿವೇಕಾನಂದನಗರ ಶಾಖೆಗಳಲ್ಲಿನ ಗ್ರಂಥಗಳನ್ನು ಗಣಕೀಕರಣಗೊಳಿಸಲು ಬೇಕಾಗುವ ವೆಚ್ಚವನ್ನು ಮೈಸೂರು ಮಹಾನಗರ ಪಾಲಿಕೆಯಿಂದ ಬಾಕಿ ಇರುವ ಗ್ರಂಥಾಲಯ ಕರದ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
     ಇದೇ ಸಂದರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯದ ಶತಮಾನೋತ್ಸವ ಸಮಾರಂಭ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿದ ಮಾಜಿ ಮಹಾಪೌರರಾದ ಆರ್.ಲಿಂಗಪ್ಪ, ನಗರ ಪಾಲಿಕೆ ಸದಸ್ಯ ಕೆ.ಟಿ.ಚಲುವೇಗೌಡ ಹಾಗೂ ಮಹಾಪೌರರನ್ನು ನಗರ ಗ್ರಂಥಾಲಯ ಪ್ರಾಧಿಕಾರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
     ಸಭೆಯಲ್ಲಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಕಾರ್ಯದರ್ಶಿಗಳು ಆದ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ  ಬಿ. ಮಂಜುನಾಥ್, ನಗರ ಕೇಂದ್ರ ಗ್ರಂಥಾಲಯದ ಅಧೀಕ್ಷಕ ಮನು.ಎಂ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ರೈಲ್ವೆ ನೇಮಕಾತಿ ಮಂಡಳಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
     ಮೈಸೂರು,ಜ.14.ರೈಲ್ವೆ ನೇಮಕಾತಿ ಮಂಡಳಿ (ಖಖಃ) ಯಲ್ಲಿ ಖಾಲಿ ಇರುವ ಕರ್ಮಷಿಯಲ್ ಅಪ್ರಂಟೀಸ್, ಟ್ರಾಫಿಕ್ ಅಪ್ರಂಟೀಸ್, ಗೂಡ್ಸ್ ಗಾರ್ಡ್, ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್, ಟ್ರಾಫಿಕ್ ಅಸಿಸ್ಟೆಂಟ್,  ಕಿರಿಯ ಲೆಕ್ಕ ಸಹಾಯಕರು ಹಾಗು ಬೆರಳಚ್ಚುಗಾರರು, ಹಿರಿಯ ಗುಮಾಸ್ತ ಹಾಗು ಬೆರಳಚ್ಚುಗಾರರ  ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು 18-32 ವರ್ಷ ವಯೋಮಿತಿಯೊಳಗಿರಬೇಕು ಪ.ಜಾ/ಪ.ಪಂ.ದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ರಿಯಾಯಿತಿ ಇರುತ್ತದೆ. ಕರ್ಮಷಿಯಲ್ ಅಪ್ರಂಟೀಸ್, ಟ್ರಾಫಿಕ್ ಅಪ್ರಂಟೀಸ್, ಗೂಡ್ಸ್ ಗಾರ್ಡ್, ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್, ಟ್ರಾಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಕಿರಿಯ ಲೆಕ್ಕ ಸಹಾಯಕರು ಹಾಗೂ ಬೆರಳಚ್ಚುಗಾರರು ಮತ್ತು  ಹಿರಿಯ ಗುಮಾಸ್ತ ಹಾಗೂ  ಬೆರಳಚ್ಚುಗಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಟೈಪಿಂಗ್‍ನಲ್ಲಿ ಪರಿಣಿತಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
     ಅರ್ಜಿ ಸಲ್ಲಿಸುವವರು ಜನವರಿ 25 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷಾ ವಿಧಾನ, ನೇಮಕಾತಿಯ ಪರಿಪೂರ್ಣ ಮಾಹಿತಿಗಾಗಿ ತಿತಿತಿ.ಡಿಡಿbbಟಿಛಿ.gov.iಟಿ    ವೆಬ್‍ಸೈಟ್ ಅಥವಾ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ , ಮೈಸೂರು ಇವರನ್ನು ಸಂಪರ್ಕಿಸಬಹುದು.



ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮತ್ತು ಪಿ.ಡಿ.ಒ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ
ಮೈಸೂರು,ಜ.14.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕರ್ನಾಟಕ ಸರ್ಕಾರವು ಬರುವ ಏಪ್ರಿಲ್ ಮಾಹೆಯ ಒಳಗೆ ನಡೆಸಲಿರುವ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮತ್ತು ಪಿ.ಡಿ.ಒ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಟ್ಟು 50 ದಿನಗಳ ತರಬೇತಿ ನೀಡಲಾಗುವುದು.
ಆಸಕ್ತರು ದಿನಾಂಕ: 19.01.2016ರ ಒಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ ದಲ್ಲಿ  ಹೆಸರು  ನೊಂದಾಯಿಸಿಕೊಳ್ಳಬಹುದೆಂದು ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಕ್ಕೆ  ದೂರವಾಣಿ ಸಂಖ್ಯೆ 0821-2515944 ಸಂಪರ್ಕಿಸುವುದು.
ಸಹಕಾರ ಸಂಘಗಳÀ ನೋಂದಣಿ ರದ್ಧತಿ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
      ಮೈಸೂರು,ಜ.14-ಹೆಚ್.ಡಿ.ಕೋಟೆ ತಾಲ್ಲೂಕಿನ ಕುಣಿಗಲ್, ಕೃಷ್ಣಾಪುರ ಹಾಗೂ ಎಂ. ಕನ್ನೇನಹಳ್ಳಿಯಲ್ಲಿರುವ  ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ಚಿಕ್ಕೆರೆಯೂರಿನಲ್ಲಿರುವ ವೀರಭದ್ರೇಶ್ವರ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ಕನ್ನೇನಹಳ್ಳಿಯಲ್ಲಿರುವ ಮಹಾತ್ಮಾಜಿ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ, ಗರಿಕೆಕಟ್ಟೆ ಕಾವಲ್‍ನಲ್ಲಿರುವ ಚಾಮುಂಡೇಶ್ವರಿ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ದೊಡ್ಡಕೆರೆಯೂರಿನಲ್ಲಿರುವ ನಂಜುಂಡೇಶ್ವರ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ಮೇಟಿಕುಪ್ಪೆ, ಚನ್ನಗುಂಡಿ, ಕೆ.ಬೆಳತ್ತೂರು, ಹಂಚಿಪುರದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ನಿ, ಕಾಟವಾಳು, ಕಾನಕನಹಳ್ಳಿ, ಕೆಂಚನಹಳ್ಳಿ,   ಎಲೆಹುಂಡಿಯಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ,  ಪುರದಲ್ಲಿರುವ  ಬಳಪದ ಕಲ್ಲಿನ ಕೈಗಾರಿಕಾ ಸಹಕಾರ ಸಂಘ ನಿ.,ಶಿಂಡೇನಹಳ್ಳಿಯಲ್ಲಿರುವ ಕನಕದಾಸ ಗ್ರಾಮಾಂತರ ಕೈಗಾರಿಕಾ ಸಹಕಾರ ಸಂಘ ನಿ.,ಪಿರಿಯಾಪಟ್ಟಣ ತಾಲ್ಲೂಕು, ಸಂಗರ ಶೆಟ್ಟಹಳ್ಳಿ, ರಾಜನಬೆಳಗುಲಿ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ, ಕಿತ್ತೂರಿನಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಕೆ.ಆರ್.ನಗರ ತಾಲ್ಲೂಕಿನ ಬೆಣಗನಹಳ್ಳಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಚುಂಚನಕಟ್ಟೆ, ಶ್ರೀರಾಮ ಸಕ್ಕರೆ ಕಾರ್ಖಾನೆ ನೌಕರರ ಸಹಕಾರ ಸಂಘ ನಿ ಹಾಗೂ ಕಿತ್ತೂರಿನಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ನಿ.  ಸಮಾಪನೆಗೊಂಡಿದ್ದು, ನೋಂದಣಿ ರದ್ಧತಿಗೆ ಸಮಾಪನಾಧಿಕಾರಿಗಳು ಕ್ರಮವಹಿಸಿರುತ್ತಾರೆ.
     ಸಮಾಪನಾಧಿಕಾರಿಗಳಿಗೆ ಸದರಿ ಸಂಘಗಳಿಗೆ ಸಂಬಂಧಿಸಿದ ಲೆಕ್ಕಪುಸ್ತಕಗಳಾಗಲೀ, ಇದನ್ನು ಹೊಂದಿರುವವರ ಮಾಹಿತಿಯಾಗಲಿ ಲಭ್ಯವಿರುವುದಿಲ್ಲ.  ಸಂಘಗಳು  ಬೈಲಾ ರೀತ್ಯಾ ಉದ್ದೇಶಗಳನ್ನು ಈಡೇರಿಸದೆ ಇರುವುದರಿಂದ ಹಾಗೂ ಈ  ಸಂಘಗಳು ಅನುಪಯುಕ್ತವಾಗಿ ಮುಂದುವರೆಯುತ್ತಿರುವುದರಿಂದ ಈ ಸಂಘಗಳ ಆಸ್ತಿ-ಜವಾಬ್ದಾರಿಯನ್ನು ನಿಯಮಾನುಸಾರ ವಿಲೇವಾರಿ ಮಾಡಿ ಸಂಘದ ನೊಂದಣಿಯನ್ನು ರದ್ಧುಪಡಿಸಲು ತೀರ್ಮಾನಿಸಿರುತ್ತಾರೆ.
    ಸದರಿ ಸಂಘದ ರದ್ಧತಿಯ ಬಗ್ಗೆ ಸದಸ್ಯರುಗಳಿಗಾಗಲಿ ಅಥವಾ ಸಾರ್ವಜನಿಕರಿಗಾಗಲೀ ಆಕ್ಷೇಪಣೆಗಳಿದ್ದಲ್ಲಿ  ಸಹಕಾರ ಅಭಿವೃದ್ಧಿ ಅಧಿಕಾರಿಗಳಿಗೆ ಈ ಪ್ರಕಟಣೆ ಪ್ರಕಟಗೊಂಡ  15 ದಿನದೊಳಗಾಗಿ ಸಲ್ಲಿಸುವ್ಯದು ಎಂದು ಸಮಾಪನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ : ಸಮಾರೋಪ ಸಮಾರಂಭ
      ಮೈಸೂರು,ಜ.14.ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ 66ನೇ ಹಿರಿಯರ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಜನವರಿ 16 ರಂದು ಸಂಜೆ 4-30 ಗಂಟೆಗೆ ಮೈಸೂರಿನ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
    ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ವಸತಿ ಸಚಿವ ಎಂ.ಹೆಚ್. ಅಂಬರೀಶ್, ಸಹಕಾರ ಹಾಗೂ ಸಕ್ಕರೆ ಸಚಿವ ಮಹದೇವ ಪ್ರಸಾದ್, ಯುವ ಸಬಲೀಕರಣ, ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ, ಸಂಸತ್ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ್ ಸಿಂಹ, ವಿಧಾನ ಸಭಾ ಸದಸ್ಯರಾದ ತನ್ವೀರ್ ಸೇಠ್, ವಾಸು, ಎಂ.ಕೆ. ಸೋಮಶೇಖರ್, ಜಿ.ಟಿ. ದೇವೇಗೌಡ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ನೋಂದಣಿ ಆರಂಭ
      ಮೈಸೂರು,ಜ.14, 8 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಈ ಬಾರಿ ಜನವರಿ 28 ರಿಂದ ಫೆಬ್ರವರಿ 4 ರವರೆಗೆ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಏಕಕಾಲಕ್ಕೆ ನಡೆಯಲಿದೆ.
       ಈ ಚಿತ್ರೋತ್ಸವದಲ್ಲಿ ಭಾಗವಹಿಸುವವರು ಹೆಸರು ನೊಂದಣಿ ಮಾಡಿಕೊಳ್ಳಬೇಕಿದ್ದು, ನೊಂದಣಿ ಕಾರ್ಯ ಧನ್ವಂತ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಾಲಯದಲ್ಲಿ ನಡೆಯುತ್ತಿದೆ. (ನೊಂದಣಿ ಸಂದರ್ಭದಲ್ಲಿ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಗುರುತಿನ  ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಒಂದು ಸಾವಿರ  ಜನರಿಗೆ ಮಾತ್ರ ನೊಂದಣಿಗೆ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.)
    7 ದಿನಗಳ ಪ್ರದರ್ಶನಕ್ಕೆ ಪ್ರತಿನಿಧಿಗಳಾಗಲು ನೋಂದಣಿ ದರ ಸಾರ್ವಜನಿಕರಿಗೆ 600/-ರೂ,  ವಿದ್ಯಾರ್ಥಿಗಳಿಗೆ, ಚಿತ್ರ ಸಮಾಜದ ಸದಸ್ಯರಿಗೆ, ಹಿರಿಯ ನಾಗರಿಕರಿಗೆ ಮತ್ತು ಚಿತ್ರೋದ್ಯಮದ ಪ್ರತಿನಿಧಿಗಳಿಗೆ 300/- ರೂ.ಗಳಾಗಿರುತ್ತದೆ.
   ಪ್ರತಿನಿಧಿಗಳಾಗಿ ನೊಂದಾಯಿಸಿಕೊಂಡವರು  ಮೈಸೂರಿನ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ 4 ತೆರೆಗಳಲ್ಲಿ  ಸಿನಿಮಾಗಳನ್ನು ವೀಕ್ಷಿಸಬಹುದು. ಅಲ್ಲದೆ ಇಚ್ಚಿಸಿದಲ್ಲಿ ಬೆಂಗಳೂರಿನ ರಾಜಾಜಿ ನಗರದ ಓರಿಯನ್ ಮಾಲ್‍ನ ಪಿವಿಆರ್ ಸಿನಿಮಾದ 11 ತೆರೆಗಳಲ್ಲಿ ಸಿನಿಮಾವನ್ನು ವೀಕ್ಷಿಸಬಹುದು.
     ಈ ಚಿತ್ರೋತ್ಸವದಲ್ಲಿ 61 ದೇಶಗಳ  170 ಚಿತ್ರಗಳು  ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2420050 ಯನ್ನು ಸಂಪರ್ಕಿಸುವುದು.
                                             
ಪ್ರಮೋದ್ ಕುಮಾರ್ ಅವರಿಗೆ ಪಿಎಚ್.ಡಿ. ಪದವಿ
    ಮೈಸೂರು,ಜ.14-ಮೈಸೂರು ವಿಶ್ವವಿದ್ಯಾಲಯವು ಪ್ರಮೋದ್ ಕುಮಾರ್ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಎನ್. ಸುರೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಭರತೇಶ ವೈಭವದ ಸಾಂಸ್ಕøತಿಕ ನೋಟ” ಕುರಿತು ಸಾದರಪಡಿಸಿದ ಎಚಿiಟಿoಟogಥಿ & Pಡಿಚಿಞಡಿiಣs  ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಪ್ರಮೋದ್ ಕುಮಾರ್ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

No comments:

Post a Comment