Friday 29 January 2016

ಮೈಸೂರು ಜ,30.ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಹೋರಾಟ ನಡೆಸಿದ ಮಹಾತ್ಮ ಗಾಂಧಿ ಅವರು ಹುತಾತ್ಮರೂ ಹಾಗೂ ಮಹಾತ್ಮರೂ ಆಗಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪುರಸ್ಕøತರಾದ ಸುರೇಂದ್ರ ಕೌಲಗಿ ಹೇಳಿದರು.
ಇಂದು ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಮೈಸೂರು ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹುತಾತ್ಮ ದಿನದ ಅಂಗವಾಗಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ನಮ್ಮ ದೇಶವು ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟೀಷರ ಕಪಿಮುಷ್ಠಿಯಲ್ಲಿತ್ತು. ಅವರಿಂದ ದೇಶವನ್ನು ಬಿಡುಗಡೆಗೊಳಿಸಲು ಮಹಾತ್ಮ ಗಾಂದಿ ಅವರೊಂದಿಗೆ ಹೆಗಲಿಗೆ ಹೆಗಲು ನೀಡಿದ ಲಾಲಾ ಲಜಪತ್‍ರಾಯ್, ಸುಭಾಷ್ ಚಂದ್ರಬೋಸ್, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಇನ್ನಿತರೆ ದೇಶ ಪ್ರೇಮಿಗಳು, ಅವಿರತ ಹೋರಾಟ ನಡೆಸಿದ್ದರು. ಅವರುಗಳ ಈ ಹೋರಾಟದಿಂದಲೇ ನಮ್ಮ ದೇಶ ಸ್ವಾತಂತ್ರ್ಯ ಗಳಿಸಿತು ಎಂದ ಕೌಲಗಿ, ಇಂತಹ ಮಹಾನಿಯರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಗಾಂಧೀಜಿ ಅವರು ನಮ್ಮ ದೇಶ ಸ್ವಾತಂತ್ರ್ಯ ಪಡೆಯಬೇಕು ಜತೆಗೆ ಸ್ವತಂತ್ರ್ಯಾನಂತರ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಬೇಕೆಂದು ಕನಸು ಕಂಡಿದ್ದರು. ಈ ಕನಸು ನನಸಾಗಿದ್ದರೂ ದೇಶವು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಲ್ಲಿ ಒಂದಾಗಬೇಕಾಗಿದೆ. ಈ ದಿಸೆಯಲ್ಲಿ ನಾವು ನಿಜವಾಗಿಯೂ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಗಾಂಧಿಜಿ ಅವರು ದೇಶದಲ್ಲಿ ಸಮಾನತೆ ಇರಬೇಕು. ಯಾವುದೇ ಹಂತದಲ್ಲಿಯೂ ತಾರತಮ್ಯ ಕಾಣಬಾರದು ಎಂಬ ಸರ್ವೋದಯ ಸಮಾಜ ನಿರ್ಮಾಣವಾಗಬೇಕೆಂದು ಬಯಸಿದ್ದರು. ಆದರೆ ದೇಶದಲ್ಲಿ ಇನ್ನೂ ಸಮಾನತೆ ಕಾಣದೆ ಎಲ್ಲಿ ನೋಡಿದರೂ ಬೇಧಭಾವ ಎದ್ದು ಕಾಣುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಹಾತ್ಮ ಗಾಂಧಿ ಅವರು ಹೊಂದಿದ್ದ ಭರವಸೆಗಳು ಕಮರುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಇಂದು ವಿಶ್ವದಲ್ಲಿ ದೇಶದೇಶಗಳ ನಡುವೆ ಒಂದಲ್ಲಾ ಒಂದು ವಿಷಯದ ಬಗ್ಗೆ ಪೈಪೋಟಿಗಳು ನಡೆಯುತ್ತಲೇ ಇವೆ. ಮುಂದಿನ ದಿನಗಳಲ್ಲಿ ಮೂರನೇ ಮಹಾಯುದ್ಧವು ಯಾವ ಕಾರಣದಿಂದಲೂ ಆರಂಭವಾಗಬಹುದು. ನಮ್ಮ ದೇಶದ ನೆರೆಯ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳು ದಾಸ್ತಾನುಗೊಂಡಿರುವುದು ಇದಕ್ಕೆ ಇಂಬು ನೀಡಿದಂತಿದೆ. ಮಹಾತ್ಮ ಗಾಂದಿ ಶಾಂತಿ ಪ್ರಿಯರಾಗಿದ್ದರು. ಅವರು ಬಯಸಿದ್ದ ಶಾಂತಿಯುತ ವಾತಾವರಣ ವಿಶ್ವಾದ್ಯಂತ ಕಾಣಬೇಕೆಂಬುದೇ ನಮ್ಮೆಲ್ಲರ ಆಶಯ. ಈ ದಿಸೆಯಲ್ಲಿ ಇಂದಿನ ಯುವ ಜನತೆ ಮಹಾತ್ಮ ಗಾಂದಿ ಅವರಂತೆಯೇ ಮಹಾತ್ಮರಾಗುವತ್ತ ಗಮನ ಹರಿಸಿದ್ದಲ್ಲಿ ಮಾತ್ರ ವಿಶ್ವದಲ್ಲಿ ಶಾಂತಿ ಕಾಣಬಹುದಾಗಿದ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂದಿ ಅವರ ಅತ್ಯಂತ ಪ್ರಿಯವಾದ ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ ಎಂಬ ಗೀತೆಯನ್ನು ಇದೇ ಸಂದರ್ಭದಲ್ಲಿ ಹಾಡುವ ಮೂಲಕ ಗಾಂಧಿ ಅವರ ನೆನಪಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾಣ ಮತ್ತು ಸತ್ರ ನ್ಯಾಯಾದೀಶರಾದ ಕೆ.ಎಸ್.ಮುದಗಲ್, ಹಿರಿಯ ವಕೀಲ ಮಾಜಿ ಶಾಸಕ ಎಚ್.ಗಂಗಾಧರನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಮೌಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.
------------- 

No comments:

Post a Comment