Saturday 23 April 2016

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತರಲು ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ:
ದಿನೇಶ್ ಹೆಗ್ಡೆ


      ಮೈಸೂರು,ಏ.23.ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಇಲಾಖೆಗಿಂತ ಹೆಚ್ಚಾಗಿ ಸ್ವಯಂ ಸೇವಾ ಸಂಸ್ಥೆಗಳಿಗೆ ತಿಳಿದಿರುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲು ಪ್ರಾರಂಭವಾಗುವುದರಲ್ಲಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ತಿಳಿಸಿದರು.
     ಅವರು ಇಂದು ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ನನ್ನ ನಡೆ ಶಾಲೆ ಕಡೆ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2013 ರಲ್ಲಿ ಮಾಧ್ಯಮದಲ್ಲಿ 54,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯವು ಸರ್ಕಾರದ ಕಾರ್ಯದರ್ಶಿಗಳಿಗೆ ಮಕ್ಕಳು ಹಾಗೂ ಪೋಷಕರಿಗೆ ಬೇಕಾಗುವ ಸವಲತ್ತುಗಳನ್ನು ಒದಗಿಸಿ ಜನವರಿ 2015 ರೊಳಗಾಗಿ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಶೂನ್ಯವಾಗಬೇಕು ಎಂದು ನಿರ್ದೇಶನ ನೀಡಿತು. ಆದರೂ ಈಗಲೂ ಕೂಡ ಶಾಲೆಯಿಂದ ಮಕ್ಕಳು ಹೊರಗುಳಿದಿರುವುದನ್ನು ನಾವು ನೋಡಬಹುದಾಗಿದೆ ಎಂದರು.
     ಶಿಕ್ಷಣ ಮಕ್ಕಳಿಗೆ ಜ್ಞಾನ, ಆತ್ಮವಿಶ್ವಾಸ, ದೇಶಪ್ರೇಮ ಮುಂತಾದ ಉತ್ತಮ ಗುಣಗಳನ್ನು ಬೆಳೆಸುತ್ತದೆ.  ಬಡತನ, ಕೆಲಸಕ್ಕಾಗಿ ಪೋಷಕರು ವಲಸೆ ಹೋಗುವುದು, ಅಲೆಮಾರಿಗಳು, ಪೋಷಕರಲ್ಲಿ ಮಾಹಿತಿ  ಹಾಗೂ ವಿದ್ಯಾಭ್ಯಾಸದ ಕೊರತೆ ಮತ್ತು ಇನ್ನಿತರ ಕಾರಣಗಳಿಂದ ಮಕ್ಕಳು ಶಾಲೆಯಿಮದ ಹೊರಗುಳಿಯುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲು ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಕಂಡುಬಂದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
     ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಬಗ್ಗೆ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಯವರು ಪೋಷಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಅವರ ಮನ ಒಲಿಸಬೇಕು. ಶಿಕ್ಷಣ ಪಡೆಯದೇ ನಕಲಿ ಅಂಕಪಟ್ಟಿ ಹಾಗೂ ಪದವಿ ಪಡೆಯುತ್ತಿರುವ ಪ್ರಕರಣಗಳನ್ನು ನೋಡುತ್ತಿದ್ದೇವೆ. ಈ ಪ್ರಕರಣಗಳು ಮಕ್ಕಳ ಮನಸ್ಸಿನಲ್ಲಿ ವಾಮ ಮಾರ್ಗಗಳ ಮೂಲಕ ಪದವಿ ಪಡೆಯಬಹುದು ಎಂಬ ಭಾವನೆ ಬೆಳೆಸುತ್ತದೆ. ಇಂತಹ ಭಾವನೆಗಳು ಮಕ್ಕಳಲ್ಲಿ ಬೆಳೆಯದಂತೆ ಸಹ ಶಿಕ್ಷಕರು ನೋಡಿಕೊಳ್ಳಬೇಕಿದೆ ಎಂದರು.
      ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಬಿ.ಎಲ್. ಭೈರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಸೌಲಭ್ಯಗಳ ಕೊರತೆ ಇತ್ತು ಪೋಷಕರಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಹಂಬಲ ಹೆಚ್ಚಿಗೆ ಇತ್ತು. ಆದರೆ ಇಂದು ಸರ್ಕಾರವೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆ, ಬಿಸಿಯೂಟ, ಕ್ಷೀರ ಭಾಗ್ಯ, ವಿದ್ಯಾರ್ಥಿವೇತನ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಿರುವಾಗ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬೇಕು ಎಂದರು.
    ಮೈಸೂರು ಮಹಾನಗರ ಪಾಲಿಕೆ ಮೈಸೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಶ್ರಮಿಸುತ್ತಿದೆ. ಶಿಕ್ಷಕರು ಸಹ ಶಾಲೆಗಳಲ್ಲಿ ಮಕ್ಕಳಿಗೆ ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ. ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ, ಕಾಗದದ ಚೀಲ ಬಳಸುವಂತೆ ತಿಳಿಸಬೇಕು ಎಂದರು.
    ಮಕ್ಕಳ ಕಲ್ಯಾಣ ಸಮಿತಿಯ ಶೀಲ ಖರೆ ಅವರು ಮಾತನಾಡಿ ಅಂತರರಾಷ್ಟ್ರಿಯ ಮಟ್ಟದಲ್ಲಿ ದೇಶಗಳು ಬಡತನ ನಿವಾರಣೆ, ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವುದು, ಲಿಂಗ ತಾರತಮ್ಯ ನಿವಾರಣೆ, 5 ವರ್ಷದೊಳಗಿನ ಮಕ್ಕಳ ಸಾವು ತಡೆಯುವುದು, ಸುರಕ್ಷಿತ ಹೆರಿಗೆ, ಮರಣಾಂತಿಕ ಖಾಯಿಲೆಗಳನ್ನು ತಡೆಗಟ್ಟುವುದು, ಪರಿಸರ ಸಂರಕ್ಷಣೆಯ ಅಭಿವೃದ್ಧಿ ಗುರಿಗಳನ್ನು ನಿಗಧಿಪಡಿಸಿಕೊಂಡಿದೆ. ಶಿಕ್ಷಕರು ಮಕ್ಕಳು ನಿರಂತರವಾಗಿ ಶಾಲೆಗೆ ಗೈರುಹಾಜರಾದಗ ಪೋಷಕರಲ್ಲಿ ಸರಿಯಾಗಿ ವಿಚಾರಿಸಿದರೆ ಮಕ್ಕಳು ಬಾಲ ಕಾರ್ಮಿಕರಾಗುವುದನ್ನು, ಬಾಲ್ಯ ವಿವಾಹವಾಗುವುದನ್ನು ತಡೆಗಟ್ಟಬಹುದು ಎಂದರು.
    ಇದೇ ಸಂದರ್ಭದಲ್ಲಿ ಶಾಲೆಯಿಂದ ಹೊರಗುಳಿದಿದ್ದ ಶ್ರೀನಿವಾಸ ಎಂ, ಚೌಡಯ್ಯ, ಸುಶೀಲ, ಅಂಕಪ್ಪ ಎಂಬ 4 ಮಕ್ಕಳನ್ನು ಸಂಕೇತಿಕವಾಗಿ ಶಾಲೆಗೆ ದಾಖಲಿಸಿಕೊಂಡು ಮಕ್ಕಳಿಗೆ ಸಮವಸ್ತ್ರ, ಶೂ, ಪುಸ್ತಕ, ಬ್ಯಾಗ್ ನೀಡಲಾಯಿತು.
    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸಪ್ಪ, ಸರ್ವ ಶಿಕ್ಷಣ ಅಭಿಯಾನದ ಯೋಜನಾಧೀಕಾರಿ ಚಂದ್ರ ಪಾಟೀಲ್, ಶಾರದ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರ್ಥಸಾರಥಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
     ಇದಕ್ಕೂ ಮುನ್ನ ನನ್ನ ನಡೆ ಶಾಲೆ ಕಡೆ ಎಂಬ ಮಕ್ಕಳ ಜಾಥಗೆ ಶಾರದ ವಿಲಾಸ ಶತಮಾನೋತ್ಸವ ಭವನದ ಮುಂಭಾಗದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ಚಾಲನೆ ನೀಡಿದರು.
ಪ್ಲಾಸ್ಟಿಕ್ ಮುಕ್ತ ಕಚೇರಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ


      ಮೈಸೂರು,ಏ.23.-ಪ್ಲಾಸ್ಟಿಕ್ ಮುಕ್ತ ಕಚೇರಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮೈಸೂರು ಉಪ ವಿಭಾಗಾಧಿಕಾರಿ ಆನಂದ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಚಿಕ್ಕನಂಜಯ್ಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ಪ್ಲಾಸ್ಟಿಕ್ ನಿಷೇಧ ಸಂದೇಶವಿರುವ ಭಿತ್ತಿಚಿತ್ರವನ್ನು ಜಿಲ್ಲಾಧಿಕಾರಿಯವರ ಕಚೇರಿ ಆವರಣದ ಕೊಡೆಗಳ ಮೇಲೆ ಅಂಟಿಸುವ ಮೂಲಕ ಇಂದು ಚಾಲನೆ ನೀಡಿದರು.
     ನಂತರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ತಮ್ಮ ಕಚೇರಿ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಸಭೆ ಕರೆದು ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರದ ಮೇಲಾಗುವ ಅಪಾಯ ಕುರಿತು ಮಾಹಿತಿ ನೀಡಿದ ಮಾತನಾಡಿ ಜಿಲ್ಲಾಧಿಕಾರಿ ಅವರು ಇಂದಿನಿಂದ ನಮ್ಮ ಕಚೇರಿ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂರ್ಪೂವಾಗಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ, ಕಾಗದ, ಬಟ್ಟೆ, ಗೋಣಿ ಹಾಗೂ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು ಎಂದರು.
    ಕಚೇರಿಗೆ ಬರುವ ಸಾರ್ವಜನಿಕರಿಗೂ ಪ್ಲಾಸ್ಟಿಕ್ ನಿಷೇಧ ಬಗ್ಗೆ ಅರಿವು ಮೂಡಿಸಬೇಕು. ಜಿಲ್ಲಾಧಿಕಾರಿಯವರ ಕಚೇರಿ ಅವರಣದಲ್ಲಿ ನಡೆಯುವ ಯಾವುದೇ ಸಭೆ ಹಾಗೂ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಸಬಾರದು. ಹಿಂದೆ 40 ಮೈಕ್ರೊಂ ಇರುವ ಪ್ಲಾಸ್ಟಿಕ್ ಬಳಸಬಹುದಾಗಿತ್ತು, ಆದರೆ ಸರ್ಕಾರ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ನಿಷೇಧ ಹೇರಿದೆ. ಸಾರ್ವಜನಿಕರನ್ನು ಜಾಗೃತಗೊಳಿಸಲು ನಮ್ಮ ಕಚೇರಿಯಲ್ಲೇ ಮೊದಲು ಪ್ಲಾಸ್ಟಕ್ ವಸ್ತುಗಳನ್ನು ನಿಷೇಧಿಸುವ ಕೆಲಸವನ್ನು ಮಾಡಿದ್ದೇವೆ. ಇದಕ್ಕೆ ಎಲ್ಲರು ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
    ಪ್ಲಾಸ್ಟಿಕ್ ಬಳಕೆಯಿಂದ ಸಮಾಜದಲ್ಲಿ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಅತಿಯಾದ ಪ್ಲಾಸ್ಟಿಕ್ ಉಪಯೋಗದಿಂದ ಕುಡಿಯುವ ನೀರಿನಲ್ಲಿ ರಾಸಾಯನಿಕಗಳು ಸೇರುತ್ತಿದೆ. ಪ್ಲಾಸ್ಟಿಕ್ ನಿಷೇಧ ಮಾತ್ರ ಪರಿಸರವನ್ನು  ಅಪಾಯದಿಂದ ತಪ್ಪಿಸಲು ಹಾಗೂ ಸಂರÀಕ್ಷಿಸಲು ಸಾಧ್ಯ. ಏಪ್ರಿಲ್ 24 ರಂದು ಪ್ಲಾಸ್ಟಿಕ್ ಮುಕ್ತ ನಗರ ಹಾಗೂ ಗ್ರಾಮ ಅಭಿಯಾನವನ್ನು ಜಿಲ್ಲಾಯಾದ್ಯಂತ ಸ್ಥಳೀಯ ಆಡಳಿತದ ನೆರವಿನೊಂದಿಗೆ ನಡೆಸಲಾಗುವುದು ಎಂದು ತಿಳಿಸಿದರು.
    ಇದೇ ವೇಳೆ ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಪ್ಲಾಸ್ಟಿಕ್ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.


“ಸಾಮಥ್ರ್ಯ ವರ್ಧನೆ ತರಬೇತಿ”
     ಮೈಸೂರು,ಏ.23.ಮೈಸೂರು ಕೇಂದ್ರ ಕಾರಾಗೃಹ ಮತ್ತು ಇದರ ವ್ಯಾಪ್ತಿಗೊಳಪಡಿಸುವ ಜಿಲ್ಲಾ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷೇತ್ರದ ಕುರಿತ ಹೆಚ್ಚಿನ ತಿಳುವಳಿಕೆ ಮೂಡಿಸುವ ಸಲುವಾಗಿ “ವೃಕ್ಷಂ ಟ್ಯಾಲೆಂಟ್ ಗ್ರೂಪ್” ಬೆಂಗಳೂರು ಇವರ ವತಿಯಿಂದ ಎರಡು ದಿನಗಳ “ಸಾಮಥ್ರ್ಯ ವರ್ಧನೆ ತರಬೇತಿಯನ್ನು ದಿನಾಂಕ:15-04-2016 ರಿಂದ 22-04-2016ರವರೆಗೆ ಕಾರಾಗೃಹಗಳ ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಸಿಬ್ಬಂದಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ ಎರಡು ದಿನಗಳ ತರಬೇತಿ ನೀಡಲಾಯಿತು. ಸದರಿ ತರಬೇತಿಯಲ್ಲಿ “ಒತ್ತಡ ನಿರ್ವಹಣೆ, ಮೌಲ್ಯಗಳು ಮತ್ತು ನೈತಿಕತೆಯ ಬಗ್ಗೆ, ವ್ಯಕ್ತಿತ್ವ ಬೆಳವಣಿಗೆ, ಪ್ರೇರಣೆ” ಹೀಗೆ ಹಲವಾರು ವಿಷಯಗಳ ಕುರಿತು ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಲಾಯಿತು.
    ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷೇತ್ರದ ಕುರಿತ ಹೆಚ್ಚಿನ ತಿಳುವಳಿಕೆ, ವ್ಯಕ್ತಿ ಬದುಕಿನಲ್ಲಿ ಅವರ ಉನ್ನತೀಕರಣಕ್ಕೆ ಅವರು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಮಾಹಿತಿ ನೀಡಿ ವೈಯಕ್ತಿಕ ಹಾಗೂ ಇಲಾಖೆಯ ಏಳಿಗೆಗೆ ಸಮಷ್ಠಿಯಾಗಿ ಕೆಲಸ ಮಾಡುವಂತೆ ತರಬೇತಿಯಲ್ಲಿ ತಿಳಿಸಲಾಯಿತು.
    “ಸಾಮಥ್ರ್ಯ ವರ್ಧನೆ ತರಬೇತಿ” ಶಿಬಿರಕ್ಕೆ ಮೈಸೂರು ಕೇಂದ್ರ ಕಾರಾಗೃಹ ಮತ್ತು ಇದರ ವ್ಯಾಪ್ತಿಗೊಳಪಡಿಸುವ ಜಿಲ್ಲಾ ಕಾರಾಗೃಹಗಳಿಂದ ಒಟ್ಟಾರೆ 150 ಸಂಖ್ಯೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಾಗಿದ್ದರು ಎಂದು ಕಾರಾಗೃಹಗಳ ಸಿಬ್ಬಂದಿ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ ಕುರಿತು ಪ್ರಮಾಣ ವಚನ ಸ್ವೀಕಾರ
    ಮೈಸೂರು,ಏ.23.-ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮತ್ತು ಮೈಸೂರು ಉಪವಿಭಾಗ ಕಛೇರಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳು ಹಾಗೂ ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಇಂದು  ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪ್ರಮಾಣ ವಚನ ಸ್ವೀಕರಿಸಿದರು.
    ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಚೇರಿಯನ್ನು ಸ್ವಚ್ಛಗೊಳಿಸಿದರು. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು /ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವೇಶ ಪರೀಕ್ಷೆ ಮುಂದೂಡಿಕೆ
     ಮೈಸೂರು,ಏ.23- ಜವಾಹರ ನವೋದಯ ವಿದ್ಯಾಲಯದ ವತಿಯಿಂದ ಏಪ್ರಿಲ್ 24 ರಂದು 9ನೇ ತರಗತಿಗೆ ನಡೆಯಬೇಕಾಗಿದ್ದ ಪ್ರವೇಶ ಪರೀಕ್ಷೆಯು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2970040 ನ್ನು ಸಂಪರ್ಕಿಸಬಹುದು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಏಪ್ರಿಲ್ 25 ರಂದು ತರಬೇತಿ ಕಾರ್ಯಕ್ರಮ
  ಮೈಸೂರು,ಏ.23- ಮೈಸೂರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಗಳ ಸಂಯಕ್ತಾಶ್ರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಏಪ್ರಿಲ್ 25 ರಂದು ಬೆಳಿಗ್ಗೆ 10-30 ಗಂಟೆಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.
     ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ. ಟಿ.ಟಿ. ಬಸವನಗೌಡ ಅವರು ಅಧ್ಯಕ್ಷತೆ ವಹಿಸುವರು.
     ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ. ಇ. ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆ ಆಯುಕ್ತೆ ಎಂ.ವಿ. ಸಾವಿತ್ರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಬಿ. ಭೀಮಪ್ಪ, ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗಂಗಾಧರ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಏಪ್ರಿಲ್ 25 ರಿಂದ ಶ್ರೀ ಶ್ವೇತವರಾಹ ಸ್ವಾಮಿ ಬ್ರಹ್ಮೋತ್ಸವ
     ಮೈಸೂರು,ಏ.23.ಮೈಸೂರಿನ ಅರಮನೆ ಕೋಟೆ ಶ್ರೀ ಶ್ವೇತವರಾಹ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್ 25 ರಿಂದ ಮೇ 6ರ ವರೆಗೆ ಬ್ರಹ್ಮೋತ್ಸವ ನಡೆಯಲಿದೆ.
     ಏಪ್ರಿಲ್ 25 ರಂದು ರಾತ್ರಿ ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, 26 ರಂದು ಸಂಜೆ ಅಧಿವಾಸರ, ರಕ್ಷಾಬಂಧನ, ಕಲ್ಯಾಣೋತ್ಸವ, 27 ರಂದು ಬೆಳಿಗ್ಗೆ ಧ್ವಜಾರೋಹಣ (ಬೆಳಿಗ್ಗೆ 9-07 ರಿಂದ 9-38 ರೊಳಗೆ ಶುಭ ಮಿಥುನ ಲಗ್ನದಲ್ಲಿ) 1ನೇ ತಿರುನಾಳ್, ರಾತ್ರಿ ಭೇರಿತಾಡನ, ತಿರುಪ್ಪರೈ, ಹಂಸವಾಹನ ಉತ್ಸವ, ಯಾಗಶಾಲಾ ಪ್ರವೇಶ, 28 ರಂದು 2ನೇ ತಿರುನಾಳ್, ರಾತ್ರಿ ಶೇಷವಾಹನ ಉತ್ಸವ, ಪಡಿಯೇತ್ರ, 29 ರಂದು 3ನೇ ತಿರುನಾಳ್, ರಾತ್ರಿ ನಾಗವಲ್ಲೀ ಮಹೋತ್ಸವ, ನರಾಂದೋಳಿಕಾರೋಹಣ, ಚಂದ್ರಮಂಡಲ ವಾಹನ ಪಡಿಯೇತ್ತ, 4ನೇ ತಿರುನಾಳ್, ಸಂಜೆ ವರಾಹ ಮುಡಿ ಉತ್ಸವ, ಪಡಿಯೇತ್ತ, ಮೇ 1 ರಂದು 5ನೇ ತಿರುನಾಳ್, ಸಂಜೆ ಪ್ರಹ್ಲಾದ ಪರಿಪಾಲನೆ, ಬೆಳ್ಳಿಗರುಡೋತ್ಸವ, ವಿಶೇಷ ಪಡಿಯೇತ್ತ, 2 ರಂದು 6ನೇ ತಿರುನಾಳ್, ಸಂಜೆ ಗಜೇಂದ್ರಮೋಕ್ಷ, ಆನೆ ವಸಂತ, ಆನೆ ವಾಹನ, ವಿಶೇಷ ಪಡಿಯೇತ್ತ, 3 ರಂದು 7ನೇ ತಿರುನಾಳ್, ಬೆಳಿಗ್ಗೆ ರಥಸ್ವಪನ್ನ, ರಥಬಲಿ, ಯಾತ್ರಾದಾನ ಪೂರ್ವಕ ಬೆ. 10-16 ರಿಂದ 11-46 ರೊಳಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ಶ್ರೀಮತ್ ಮಹಾರಥೋತ್ಸವ. 4 ರಂದು 8ನೇ ತಿರುನಾಳ್, ರಾತ್ರಿ ತೆಪ್ಪೋತ್ಸವ, ಡೋಲೋತ್ಸವ, ಕುದುರೆ ವಾಹನ, ಕಳ್ಳರಸುಲಿಗೆ ಉತ್ಸವ, 5 ರಂದು 9ನೇ ತಿರುನಾಳ್, ಬೆಳಿಗ್ಗೆ ತೀರ್ಥಸ್ನಾನ, ಶ್ರೀ ವರಹಾ ಜಯಂತಿ, ನಗರ ಶೋಧನೆ, ಸಂಧಾನ ಸೇವೆ ಹಾಗೂ 6 ರಂದು ಬೆಳಿಗ್ಗೆ ಮಹಾಭಿಷೇಕ, ಸಂಜೆ ಪುಷ್ಪಯಾಗ, ದ್ವಾದತಾರಾಧನೆ, ಹನುಮಂತ ವಾಹನ, ಧ್ವಜಾವರೋಹಣ, ಉದ್ವಾಸನ ಪ್ರಬಂಧ ಮೂಕಬಲಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಅರಮನೆ ಮುಜರಾಯಿ ಸಂಸ್ಥೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಕೇಂದ್ರ ಮುಖ್ಯ ಗ್ರಂಥಾಲಯದಿಂದ “ವಿಶ್ವ ಪುಸ್ತಕ ದಿನ” ಆಚರಣೆ
     ಮೈಸೂರು,ಏ.23. ಮೈಸೂರಿನ ನಗರ ಕೇಂದ್ರ ಮುಖ್ಯ ಶಾಖಾ ಗ್ರಂಥಾಲಯದಲ್ಲಿ ಇಂದು ನಡೆದ “ವಿಶ್ವ ಪುಸ್ತಕ ದಿನಾಚರಣೆ” ಅಂಗವಾಗಿ ಪುಸ್ತಕ ಪ್ರದರ್ಶನವನ್ನು ಸಾ.ಪ. ವಸಂತ ಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
   ನಗರ ಕೇಂದ್ರ ಗ್ರಂಥಾಲಯದ ಅಧೀಕ್ಷಕರಾದ ಮನು ಎಂ. ಅವರು ಮಾತನಾಡಿ ಸಾರ್ವಜನಿಕ ಓದುಗರನ್ನು ಉದ್ದೇಶಿಸಿ ಪುಸ್ತಕ ಸಂಸ್ಕøತಿ ಹಾಗೂ ಸುಪ್ರಸಿದ್ದ ಸಾಹಿತಿಯಾದ ವಿಲಿಯಂ ಷೇಕ್ಸ್‍ಪೀಯರ್ ರವರ ಯಶಸ್ಸು, ಸಾಧನೆ ಮತ್ತು ಕೀರ್ತಿಯು ಸಾಹಿತ್ಯದ ಮೂಲಕ ಅಜರಾಮರವಾಗಿದೆ ಎಂದರು.
    ಗ್ರಂಥಾಲಯ ಸಹಾಯಕರಾದ ವಿಜಯ್ ನಾಗ್ ಜಿ. ಅವರು “ಪ್ಲಾಸ್ಟಿಕ್ ಮುಕ್ತ ದಿನ” ಅಂಗವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ಸಾರ್ವಜನಿಕರಿಗೆ ತಿಳಿಸಿದರು.
     ಕಾರ್ಯಕ್ರಮದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಶಾಸಕರಿಂದ ಮಾರಟ ಮಳಿಗೆ ಉದ್ಘಾಟನೆ


    ಮೈಸೂರು,ಏ.23. ನಗರದ ಬನ್ನಿಮಂಟಪ ‘ಸಿ’ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಜಿಲ್ಲಾ ಹಾಪ್‍ಕಾಮ್ಸ್‍ನ ಹಣ್ಣು ತರಕಾರಿ ಮಾರಾಟ ಮಳಿಗೆಯನ್ನು ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಉದ್ಘಾಟಿಸಿದರು. ಹಾಪ್‍ಕಾಮ್ಸ್‍ನ ಅಧ್ಯಕ್ಷ ಬಿ.ಪಿ. ಬೋರೇಗೌಡ, ಉಪಾಧ್ಯಕ್ಷ ಆರ್. ಸರ್ವೇಶ್, ಕೆ.ಹೆಚ್.ಎಫ್‍ನ ಉಪಾಧ್ಯಕ್ಷ ರಾಜಶೇಖರ್, ಆಡಳಿತ ಮಂಡಳಿ ನಿರ್ದೇಶಕ ಸೂರ್ಯಕುಮಾರ್, ಹೊಸಹುಂಡಿ ರಘು, ಕೆ.ಎಸ್. ನಾಗರಾಜು ಹಾಗೂ ಮಹಾನಗರ ಪಾಲಿಕೆ ಸದಸ್ಯ ಎಂ.ಡಿ. ನಾಗರಾಜ್ ಅವರು ಹಾಜರಿದ್ದರು.                                
    ಏಪ್ರಿಲ್ 26 ರಂದು ವಿಶೇಷ ಕೌನ್ಸಿಲ್ ಸಭೆ
     ಮೈಸೂರು,ಏ.23. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಏಪ್ರಿಲ್ 26 ರಂದು ಮಧ್ಯಾಹ್ನ 3 ಗಂಟೆಗೆ ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment