Tuesday 5 November 2013

ಸಹಕಾರ ಸಚಿವ ಹೆಚ್.ಎಸ್.ಮಹದೇವ್ಪ್ರಸಾದ್.

 'ನಾವು ನುಡಿದಂತೆ ನಡೆಯುವವರು'
ಸಹಕಾರ ಸಚಿವ ಮಹದೇವ ಪ್ರಸಾದ್ ಪ್ರತಿಪಾದನೆ
ಮಂಡ್ಯ,ನ.5-ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಸರಕಾರ ಈಡೇರಿಸಿದೆ ಎಂದು ಸಹಕಾರ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಪ್ರತಿಪಾದಿಸಿದ್ದಾರೆ.
ತಾಲ್ಲೂಕಿನ ತಿಮ್ಮನಹೊಸೂರು, ಮಂಗಲ ಗ್ರಾಮಗಳ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ನೂತನ ಕಟ್ಟಡಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು ನಮ್ಮದು ನುಡಿದಂತೆ ನಡೆಯುವ ಪಕ್ಷ, ಸರಕಾರವೆಂದು ಹೇಳಿಕೊಂಡರು.
ಸಹಕಾರ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯ ಸಾಧನೆ ಬಹಳ ದೊಡ್ಡದು. ಸಹಕಾರ ಕ್ಷೇತ್ರದಿಂದ ಲಭ್ಯವಿರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ರೈತರಿಗೆ ಸಚಿವರು ಕರೆ ನೀಡಿದರು.
ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರೈತರ ಸಾಲಮನ್ನಾ ಇದರಲ್ಲಿ ಪ್ರಮುಖವಾದುದು. ರೈತರ ಪೂರಕ ಕಸುಬುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗಿದೆ. ಹಾಲಿಗೆ ಪ್ರೋತ್ಸಾಹ ಧನದಲ್ಲಿ ಹೆಚ್ಚಳವನ್ನು ಅವರು ಇದಕ್ಕೆ ಉದಾಹರಣೆಯನ್ನಾಗಿ ನೀಡಿದರು.
ಈ ಹಿಂದಿನ ಸರಕಾರ ಕೈಗೊಂಡಿದ್ದ ಕೆಲವು ಒಳ್ಳೆಯ ಯೋಜನೆಗಳಲ್ಲಿದ್ದ ಕೆಲವು ತೊಡಕುಗಳನ್ನು ನಿವಾರಿಸಿ ಅನುಷ್ಠಾನಗೊಳಿಸುವ ಕೆಲಸಕ್ಕೂ ಸರಕಾರ ಕೈಹಾಕಿದೆ. ಸದಸ್ಯತ್ವ ಪಡೆದ ಆರು ತಿಂಗಳ ನಂತರ ಅದರ ಉಪಯೋಗ ಪಡೆಯುವ ಪದ್ಧತಿ ಯಶಸ್ವಿನಿ ಯೋಜನೆಯದಾಗಿತ್ತು. ಈಗ ತಂದಿರುವ ಮಾರ್ಪಾಡಿನಿಂದ ಸದಸ್ಯತ್ವ ಪಡೆದ ತಕ್ಷಣವೇ ಯಶಸ್ವಿನಿ ಫಲಾನುಭವಿಗಳು ಅದರ ಲಾಭ ಪಡೆದುಕೊಳ್ಳಬಹುದೆಂದರು.
ವಸತಿ ಸಚಿವ ಅಂಬರೀಷ್ ಮಾತನಾಡಿ, ಸಹಕಾರ ಸಚಿವರು ಒಳ್ಳೆಯ ಕೆಲಸ ಮಾಡುತ್ತಿದ್ದು, ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕೆಂದು ಜನರಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿ ಎಂ.ಎಚ್.ಕೃಷ್ಣಯ್ಯ, ಜಿಪಂ ಸಿಇಓ ಪಿ.ಸಿ.ಜಯಣ್ಣ, ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಹಾಗೂ ಇತರರು ಸಮಾರಂಭದಲ್ಲಿ ಹಾಜರಿದ್ದರು.

No comments:

Post a Comment