Friday 15 November 2013

ಆರೋಗ್ಯ ಸಚಿವ.ಯು.ಟಿ.ಖಾದರ್

ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಬದ್ದ-ಸಚಿವ ಯು.ಟಿ.ಖಾದರ್


ಬೆಂಗಳೂರು: ಶಾಲಾ ಮಕ್ಕಳು ಸೇರಿ ರಾಜ್ಯದ ಎಲ್ಲಾ ವರ್ಗದವರಿಗೂ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಆಗಿರುವ ಬದಲಾವಣೆ ಮತ್ತು ಜಾರಿಗೆ ಬಂದಿರುವ ಹೊಸ ಯೋಜನೆಗಳ ಕುರಿತಂತೆ ವಿವರಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ 20 ಯೋಜನೆಗಳನ್ನು ಪ್ರಕಟಿಸಿದ್ದು, ಈ ಎಲ್ಲ  ಯೋಜನೆಗಳನ್ನು ಕಾರ್ಯಗತಗೊಳಿಸಲು  ಆದೇಶ ಹೊರಡಿಸಲಾಗಿದೆ. ಇದರ ಜತೆಗೆ ಬಡವರಿಗೆ ಅನುಕೂಲವಾಗುವ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಮೊಬೈಲ್, ಸಿಮ್‌ಕಾರ್ಡ್: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹಧನದ ಜತೆಗೆ ರಾಜ್ಯ ಸರ್ಕಾರವೂ ಅಷ್ಟೇ ಪ್ರಮಾಣದ ಪ್ರೋತ್ಸಾಹಧನ ನೀಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದೆ ಎಂದರು.
ಇನ್ನಷ್ಟು ಪರಿಣಾಮಕಾರಿ: ಆರೋಗ್ಯ ಕವಚ-108 ಯೋಜನೆಯಡಿ ಪ್ರತಿ ಒಂದು ಲಕ್ಷ ಮಂದಿಗೆ ಒಂದು ಆ್ಯಂಬುಲೆನ್ಸ್ ಒದಗಿಸಲು 94 ವಾಹನಗಳ ಖರೀದಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಯೋಜನೆಗೆ ಇನ್ನಷ್ಟು ನೆರವಿಗೆ ಮುಂದೆ ಕೇಂದ್ರ ಬಂದಿದ್ದು, ಮುಂದಿನ ದಿನಗಳಲ್ಲಿ ಪ್ರತಿ 70 ಸಾವಿರ ಜನಸಂಖ್ಯೆಗೆ 1 ಆಂಬುಲೆನ್ಸ್ ಒದಗಿಸಲು ಒಪ್ಪಿಗೆ ನೀಡಿದೆ. ಇದಕ್ಕಾಗಿ 150 ಆಂಬೆ ಖರೀದಿಗೆ ತೀರ್ಮಾನಿಸಲಾಗಿದೆ ಎಂದರು.
ನಗು-ಮಗು ಯೋಜನೆ: ನಗು-ಮಗು ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ಬರುವವರಿಗೆ ಉಚಿತವಾಗಿ ಆಸ್ಪತ್ರೆಗೆ ಕರೆತರುವುದು, ಉಚಿತ ಹೆರಿಗೆ, ಮಡಿಲು ಕಿಟ್ ವಿತರಿಸಲಾಗುತ್ತದೆ. ನಂತರ ತಾಯಿ-ಮಗುವನ್ನು ಆಸ್ಪತ್ರೆಯಿಂದ ಮನೆಗೆ ಉಚಿತವಾಗಿ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದರು. ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ ಜಿಲ್ಲಾ ಶಾಲಾ ಆರೋಗ್ಯಯೋಜನೆ ಜಾರಿಗೆ ತರಲಾಗಿದ್ದು, ಪ್ರತಿ  ತಾಲೂಕಿಗೆ ವೈದ್ಯರು ಮತ್ತು ಇತರೆ ಸಿಬ್ಬಂದಿ ಇರುವ ಎರಡು ವಾಹನಗಳನ್ನು ಒದಗಿಸಲಾಗಿದೆ ಎಂದರು.

ಅಂಧತ್ವ ರಹಿತ ಕರ್ನಾಟಕ: ಅಂಧತ್ವ ರಹಿತ ಕರ್ನಾಟಕ ರೂಪಿಸಲು ಶಾಲೆಗಳಲ್ಲೇ ಮಕ್ಕಳ ನೇತ್ರ ತಪಾಸಣೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದವರಿಗೆ ಕನ್ನಡಕ, ಶಸ್ತ್ರಚಿಕಿತ್ಸೆಯನ್ನು ಸರ್ಕಾರದಿಂದಲೇ ಒದಗಿಸಲಾಗುತ್ತದೆ. ಇದರ ಜತೆಗೆ ಹಿರಿಯ ನಾಗರಿಕರಿಗೂ ಈ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಇದೀಗ ಸರ್ಕಾರ 3900 ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ನರ್ಸ್‌ಗಳನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ.ಎಂದ ಅವರು ಈ ಪೈಕಿ 2400 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಕಾರಣದಿಂದಾಗಿ ನೇಮಕಾತಿ ಆದೇಶ ನೀಡಿಲ್ಲ. ತಿಂಗಳಲ್ಲಿ ನೇಮಕಾತಿ ಆದೇಶ ನೀಡಲಾಗುವುದು. ಜತೆಗೆ 336 ಎಂಬಿಬಿಎಸ್ ವೈದ್ಯರು ಸೇರಿ 1500 ಸಿಬ್ಬಂದಿ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

No comments:

Post a Comment