Friday 2 November 2012

S.M. KRISHNA NEWS



ಕಾಣಿಕೆಗಳನ್ನು ಸರಕಾರಕ್ಕೆ ಹಿಂತಿರುಗಿಸಿದ ಕೃಷ್ಣ
ರಾಷ್ಟ್ರಪತಿಯಾಗಿದ್ದಾಗ ತಮಗೆ ಬಂದ ಎಲ್ಲ ಉಡುಗೊರೆಗಳನ್ನು ಪ್ರತಿಭಾ ಪಾಟೀಲ್ಅವರು ತವರು ಜಿಲ್ಲೆ ಅಮರಾವತಿಗೆ ಸಾಗಿಸಿದ ನಿದರ್ಶನ ಇರುವಾಗಲೇ ವಿದೇಶಾಂಗ ಸಚಿವರಾಗಿದ್ದಾಗ ತಮಗೆ ಬಂದ ಎಲ್ಲ ಕಾಣಿಕೆಗಳನ್ನು ಸರ್ಕಾರಕ್ಕೆ ಹಿಂತಿರುಗಿಸುವ ಮೂಲಕ ಎಸ್‌.ಎಂ. ಕೃಷ್ಣ ಅವರು ಮಾದರಿಯಾಗಿದ್ದಾರೆ.
ಪತ್ನಿಯ ಪರವಾಗಿ ತಾವು ನೀಡಿದ್ದ ಉಡುಗೊರೆಗೆ ಪ್ರತಿಯಾಗಿ ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ಅವರು ನೀಡಿದ್ದ ಅಂಗಿಯ ತೋಳಿನ ಗುಂಡಿಗೆ ಹಾಕಿಕೊಳ್ಳುವ ಒಂದು ಜತೆ ಬೆಳ್ಳಿ ಆಭರಣವನ್ನು ಹೊರತುಪಡಿಸಿ ಉಳಿದೆಲ್ಲಾ ಉಡುಗೊರೆಗಳನ್ನು ಕೃಷ್ಣ ಅವರು ವಿದೇಶಾಂಗ ಮಂತ್ರಾಲಯದ ಉಗ್ರಾಣಕ್ಕೆ ಹಸ್ತಾಂತರಿಸಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಕೃಷ್ಣ ಅವರು 45 ಉಡುಗೊರೆಗಳನ್ನು ಮರಳಿಸಿದ್ದಾರೆ. ಮೂರು ವರ್ಷಗಳ ಅವದಿಯಲ್ಲಿ ಕೃಷ್ಣ ಅವರಿಗೆ 98 ವಸ್ತುಗಳು ಹಾಗೂ 125 ಪುಸ್ತಕಗಳು ಸೇರಿದಂತೆ 200ಕ್ಕೂ ಹೆಚ್ಚು ಉಡುಗೊರೆಗಳು ಬಂದಿದ್ದವು. ಎಲ್ಲವನ್ನೂ ಕೃಷ್ಣ ಹಿಂತಿರುಗಿಸಿದ್ದಾರೆ. ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ರಾಜಾ ಪರ್ವೇಜ್ಅಶ್ರಫ್ ಅವರು ನೀಡಿದ್ದ ಜಮಖಾನ ಹಾಗೂ ಬೆಳ್ಳಿಯ ಬಟ್ಟಲು, ಚೀನಾ ನೀಡಿದ್ದ ಒಂದು ಟೀವಿ ಹಾಗೂ ಪಿಂಗಾಣಿ ವಸ್ತುಗಳು ಕೃಷ್ಣ ಮರಳಿಸಿದ ಉಡುಗೊರೆ ಪಟ್ಟಿಯಲ್ಲಿ ಸೇರಿವೆ. ಕೃಷ್ಣ ಅವರಿಗೆ ಕಡೆಯದಾಗಿ ಉಡುಗೊರೆ ನೀಡಿದ್ದವರು ಬ್ರೂನಿ ಸುಲ್ತಾನರು. ಅವರು ಬೆಳ್ಳಿ ಸಾಮಾನುಗಳನ್ನು ನೀಡಿದ್ದರು.
                                   ಸಂಗ್ರಹಾಗಾರದಲ್ಲಿ.. ಉಡುಗೊರೆ
ಕೃಷ್ಣ ಹಿಂತಿರುಗಿಸಿದ ವಸ್ತುಗಳನ್ನೆಲ್ಲಾ ವಿದೇಶಾಂಗ ಮಂತ್ರಾಲಯದ ಉಗ್ರಾಣವಾದ ತೋಶಕಾನದಲ್ಲಿಡಲಾಗಿದೆ. ಉಡುಗೊರೆ, ಅದರ ಮೌಲ್ಯ, ಕೊಟ್ಟವರು, ಸ್ವೀಕರಿಸಿದವರು, ವರ್ಗಾವಣೆಯಾದ ದಿನಾಂಕ ಎಲ್ಲವನ್ನೂ ಇಲ್ಲಿ ಬರೆದುಕೊಳ್ಳಲಾಗುತ್ತದೆ.
ಕೃಷ್ಣ ಅವರು ತಮ್ಮ ಪತ್ನಿಯ ಪರವಾಗಿ ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ಅವರಿಗೆ ಚಿನ್ನದ ಆಭರಣ ಉಡುಗೊರೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಹಿಲರಿ ಅವರು ಕೃಷ್ಣಗೆ ಅಂಗಿಯ ತೋಳಿನ ಗುಂಡಿಗೆ ಹಾಕಿಕೊಳ್ಳುವ ಬೆಳ್ಳಿ ಆಭರಣ ನೀಡಿದ್ದರು. ಅದೊಂದನ್ನು ಮಾತ್ರ ಕೃಷ್ಣ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

No comments:

Post a Comment